ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ವಿಭಜನೆಯಾಗುವ ಸಾಧ್ಯತೆ ಇದೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿಯನ್ನು ಮೂರು ಭಾಗಗಳಗಿ ವಿಂಗಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಗ್ರೇಟರ್ ಬೆಂಗಳೂರು ಹೆಸರಿನಡಿ ಕಾಂಗ್ರೆಸ್ ಸರ್ಕಾರ ಪಾಲಿಕೆಯನ್ನು ಇಬ್ಬಾಗ ಮಾಡಲು ಮುಂದಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಸಿಲಿಕಾನ್ ಸಿಟಿಯನ್ನು ಮೂರು ಭಾಗಗಳಾಗಿ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜ್ಯ ಬಜೆಟ್ ನಲ್ಲಿ ಬಿಬಿಎಂಪಿ ವಿಂಗಡನೆ ಬಗ್ಗೆ ಈಗಾಗಲೇ ಉಲ್ಲೇಖ ಮಾಡಲಾಗಿದೆ. ಕೆಂಪೇಗೌಡ, ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಎಂಬ ಮೂರು ಭಾಗಗಳಗಿ ವಿಂಗಡಣೆ ಮಾಡುವ ಸಾಧ್ಯತೆ ಇದೆ. ಮೂರೂ ಭಾಗಗಳಲ್ಲಿ ಮೇಯರ್ ನೇಮಕ ಮಾಡುವಂತೆ ನೀತಿ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.
ಮೂರು ವಿಭಾಗಗಳಾಗಿ ವಿಂಗಡಣೆಯಾದಾಗ ಪಾಲಿಕೆಯ ನಿಯಂತ್ರಣ ಗ್ರೇಟರ್ ಬೆಂಗಳೂರು ಕೈಯಲ್ಲಿರಲಿದೆ. ಪಾಲಿಕೆಯ ಯಾವುದೇ ನಿರ್ಣಾಯ ಕೈಗೊಳಬೇಕಾದರೂ ಗ್ರೇಟರ್ ಬೆಂಗಳೂರು ಅಥಾರಿಟಿ ಒಪ್ಪಿಗೆ ಪಡೆಯುವುದು ಕಡ್ಡಾಯ. ಇದರಿಂದಾಗಿ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂಬುವುದು ಕಾಂಗ್ರೆಸ್ ನ ವಿಚಾರವಾಗಿದೆ. ಆದರೆ, ಬೆಂಗಳೂರು ಇಬ್ಭಾಗ ಮಾಡುವುದರ ಮೂಲಕ ಕಾಂಗ್ರೆಸ್ ಸರ್ಕಾರ ಕೆಂಪೇಗೌಡರಿಗೆ ಅವಮಾನ ಮಾಡಲು ಹೊರಟಿದೆ ಎಂದು ಈಗಾಗಲೇ ಹಲವರು ಆರೋಪಿಸುತ್ತಿದ್ದಾರೆ.