ಬೆಂಗಳೂರು: ಇಲ್ಲಿಯವರೆಗೆ ಸಾರ್ವಜನಿಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇಲ್ಲಿ ಬಿಬಿಎಂಪಿಯೇ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವ ಆರೋಪವೊಂದು ಕೇಳಿ ಬಂದಿದೆ.
ಪಾಲಿಕೆಯು ಖಾಸಗಿ ಜಾಗವನ್ನು ಒತ್ತುವರಿ ಮಾಡಿಕೊಂಡು ಪಾರ್ಕ್ ನಿರ್ಮಾಣ ಮಾಡಿದೆ ಎನ್ನಲಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಈಗ ಪಾಲಿಕೆ ಬೆಲೆ ತೆರಬೇಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಲಿಕೆಗೆ ಕೋಟ್ಯಾಂತರ ಹಣ ಟಿಡಿಆರ್ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ದಾಸರಹಳ್ಳಿ ವಲಯದ ಮಲ್ಲಸಂದ್ರ ವಾರ್ಡ್ ನಲ್ಲಿ ಮೂರುವರೆ ಗುಂಟೆ ಜಾಗವನ್ನು ಪಾಲಿಕೆ ಒತ್ತುವರಿ ಮಾಡಿಕೊಂಡಿದೆ. ಒತ್ತುವರಿ ಮಾಡಿ ಕೋಟ್ಯಾಂತರ ಹಣ ಖರ್ಚು ಮಾಡಿ ಪಾಲಿಕೆ ಅಧಿಕಾರಿಗಳು ಹೈಟೆಕ್ ಪಾರ್ಕ್ ನಿರ್ಮಾಣ ಮಾಡಿದೆ. ಆದರೆ, ಈಗ ಈ ಜಾಗದ ಮಾಲೀಕ ವೆಂಕಟೇಶ್ ಎಂಬುವವರು ಪಾಲಿಕೆಗೆ ಮಾರುಕಟ್ಟೆ ಬೆಲೆಯ ದರ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಈಗಿನ ದರ ನೀಡಲು ಆಗುವುದಿಲ್ಲ. ಬದಲಾಗಿ ಟಿಡಿಆರ್ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಮಾಲೀಕನ ಪರ ಕೋರ್ಟ್ ನಲ್ಲಿ ಕೂಡ ಆದೇಶ ಹೊರ ಬಿದ್ದಿದೆ. ಇದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗ ಪಾಲಿಕೆ ಬಿಬಿಎಂಪಿ ಆಯುಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.