ಬೆಂಗಳೂರು: ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಸಮೀಕ್ಷೆ ನಡೆಯಲಿದೆ. ಪಾಲಿಕೆಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 5ರಿಂದ ಸಮೀಕ್ಷೆ ಆರಂಭವಾಗಲಿದೆ.
ನಾಗ ಮೋಹನ್ ದಾಸ್ ವರದಿ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ನಡೆಸಲು ಸರ್ಕಾರ ಸಮಿತಿ ರಚನೆ ಮಾಡಿದೆ. ಅಲ್ಲದೇ, ಈ ಸಮಿತಿಗೆ 10 ದಿನಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಸಮೀಕ್ಷೆಗೆ ಬಿಬಿಎಂಪಿ ಹಾಗೂ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯು ಪರಿಶಿಷ್ಟ ಜಾತಿಗಳ ಆರ್ಥಿಕ ಪರಿಸ್ಥಿತಿ ಕುರಿತು ದತ್ತಾಂಶ ಸಂಗ್ರಹಿಸಬೇಕು. ನಗರದ ಪ್ರತಿ ಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಬೇಕು. ಆನಂತರ ಹಿರಿಯ ಅಧಿಕಾರಿಗಳು ರ್ಯಾಂಡಮ್ ಅಗಿ ಅದನ್ನು ಪರಿಶೀಲನೆ ಮಾಡುತ್ತಾರೆ. ಸರ್ವೇ ಮುಗಿದ ಮೇಲೆ ಬಿಬಿಎಂಪಿಯು ದತ್ತಾಂಶವನ್ನು ಆಪ್ ಮೂಲಕ ಬಿಡುಗಡೆ ಮಾಡುತ್ತದೆ. ಒಂದು ವೇಳೆ ತಪ್ಪು ಕಂಡು ಬಂದರೆ ಆಪ್ ಮೂಲಕ ಸರಿಪಡಿಸಲು ಅವಕಾಶ ಇರುತ್ತದೆ.