ಬೆಂಗಳೂರು: ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ ಜಾಗತಿಕ ಕಂಪನಿಯಾದ ಬಾಯರ್ ಸಂಸ್ಥೆಯು ಸೇಫ್ ವಾಟರ್ ನೆಟ್ವರ್ಕ್ ಇಂಡಿಯಾ ಜೊತೆಗಿನ ಸಹಭಾಗಿತ್ವದಲ್ಲಿ, ಕರ್ನಾಟಕದ ಚಿಕ್ಕಬಳ್ಳಾಪುರ ಸುತ್ತಮುತ್ತ 20 ಐಜಲ್ ಕೇಂದ್ರಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತೆಲಂಗಾಣದಲ್ಲಿ ಒಟ್ಟು 90 ಐಜಲ್ ಕೇಂದ್ರಗಳನ್ನು ಸ್ಥಾಪಿಸುವ ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ ಈ ಐಜಲ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಕೇಂದ್ರಗಳು ಸುಮಾರು 3 ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸಲಿವೆ.
ಭಾರತದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದು, ಅನಿಯಮಿತವಾಗಿ ಮಳೆ ಬರುವುದು ಮತ್ತು ಕಳಪೆ ನಾಗರಿಕ ಮೂಲಸೌಕರ್ಯದಿಂದಾಗಿ ಶುದ್ಧ ಕುಡಿಯುವ ನೀರಿನ ಅಲಭ್ಯತೆ ಉಂಟಾಗುತ್ತಿದೆ. ವಿಶ್ವದ ಜನಸಂಖ್ಯೆಯ ಶೇ.18ರಷ್ಟು ಜನಸಂಖ್ಯೆ ಭಾರತದಲ್ಲಿಯೇ ಇದ್ದರೂ ಕೇವಲ ಶೇ.4ರಷ್ಟು ಮಂದಿ ಮಾತ್ರ ನೀರಿನ ಲಭ್ಯತೆಯನ್ನು ಹೊಂದಿದ್ದಾರೆ. ಹಾಗಾಗಿಯೇ ಭಾರತವು ಶುದ್ಧ ನೀರಿನ ವಿಚಾರದಲ್ಲಿ ಬಹಳ ಸಮಸ್ಯೆ ಎದುರಿಸುತ್ತಿದೆ.[i] ಬಾಯರ್ ಸಂಸ್ಥೆಯು ಐಜಲ್ ಕೇಂದ್ರಗಳ ರೂಪದಲ್ಲಿ ವಾಟರ್ ಎಟಿಎಂಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಶುದ್ಧ ನೀರಿನ ಪೂರೈಕೆ ಮಾಡಲಿದೆ.
ಈ ಯೋಜನೆಯು ಕೇವಲ ಶುದ್ಧ ನೀರನ್ನು ಒದಗಿಸುವುದಷ್ಟೇ ಅಲ್ಲ, ಸ್ಥಳೀಯ ಸ್ವ-ಸಹಾಯ ಗುಂಪುಗಳು ಮತ್ತು ಉದ್ಯಮಿಗಳನ್ನು ಒಳಗೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಐಜಲ್ ಕೇಂದ್ರಗಳ ಪ್ರಯೋಜನ ದೊರಕಲಿದೆ.
ಐಜಲ್ ಕೇಂದ್ರಗಳ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಬಾಯರ್ ಫೌಂಡೇಷನ್ ಇಂಡಿಯಾದ ನಿರ್ದೇಶಕರು, ಬೇಯರ್ ಅಸಿಯಾನ್, ಎ ಎನ್ ಝಡ್ ಮತ್ತು ಸೌತ್ ಏಷ್ಯಾದ ಕ್ಲಸ್ಟರ್ ಕಾಮ್ಸ್ ಹೆಡ್ ಮತ್ತು ಉಪಾಧ್ಯಕ್ಷರಾದ ರಚನಾ ಪಾಂಡಾ ಅವರು, “ಶುದ್ಧ ಕುಡಿಯುವ ನೀರು ಅಗತ್ಯವಷ್ಟೇ ಅಲ್ಲ, ಅದು ಎಲ್ಲರ ಹಕ್ಕು. ಬೆಂಗಳೂರಿನಲ್ಲಿ ಐಜಲ್ ಕೇಂದ್ರಗಳನ್ನು ಆರಂಭಿಸುವ ಮೂಲಕ ನಾವು ಜನರಿಗೆ ಶುದ್ಧ ನೀರಿನ ಭದ್ರತೆಯನ್ನು ಹೊಂದಲು ಸಹಾಯ ಮಾಡುತ್ತಿದ್ದೇವೆ. ಈ ಮಾದರಿಯು ಶುದ್ಧ ನೀರನ್ನು ಮಾತ್ರ ಒದಗಿಸುವುದಿಲ್ಲ, ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ, ಮಹಿಳೆಯರಿಗೆ ಪ್ರಮುಖ ಕೆಲಸ ಮಾಡಲು ಹೆಚ್ಚಿನ ಸಮಯವನ್ನು ನೀಡುತ್ತದೆ, ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸಮಾಜ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ” ಎಂದು ಹೇಳಿದರು.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತೆಲಂಗಾಣದಲ್ಲಿ ಐಜಲ್ ಕೇಂದ್ರಗಳ ಸ್ಥಾಪನೆ ಪ್ರಗತಿಯಲ್ಲಿದೆ. ಈಗಾಗಲೇ 34 ಸ್ಥಳಗಳು ದೃಢೀಕರಣಗೊಂಡಿದ್ದು, ರಾಷ್ಟ್ರದಾದ್ಯಂತ 56 ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯ ನೆರವೇರುತ್ತಿದೆ. ಸ್ಥಳೀಯ ಸ್ವ-ಸಹಾಯ ಗುಂಪುಗಳು ಮತ್ತು ಉದ್ಯಮಿಗಳಿಂದ ನಿರ್ವಹಿಸಲ್ಪಡುವ ಈ ಕೇಂದ್ರಗಳು, ಪ್ರಿಪೇಯ್ಡ್ ಆರ್ ಎಫ್ ಐ ಡಿ ಕಾರ್ಡ್ ವ್ಯವಸ್ಥೆಯ ಮೂಲಕ ಕೈಗೆಟುಕುವ ದರದಲ್ಲಿ ಶುದ್ಧ ನೀರನ್ನು ಒದಗಿಸುತ್ತವೆ. ಬೆಂಗಳೂರಿನಲ್ಲಿ ಪ್ರತೀದಿನ ಸುಮಾರು 500 ಮಿಲಿಯನ್ ಲೀಟರ್ ಗಳಷ್ಟು ನೀರಿನ ಕೊರತೆ ಇದ್ದು, ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ ಬಳಕೆ ಸುಸ್ಥಿರ ಮಟ್ಟಕ್ಕಿಂತ ಶೇ.145ರಷ್ಟು ಹೆಚ್ಚಾಗಿದೆ. ಅನೇಕ ಗ್ರಾಮಗಳು ಈಗ ವಾಟರ್ ಟ್ಯಾಂಕರ್ ಗಳ ಮೇಲೆ ಅವಲಂಬಿತವಾಗಿದ್ದು, ಇವೆಲ್ಲವೂ ಶುದ್ಧ ನೀರಿನ ತುರ್ತು ಅಗತ್ಯವನ್ನು ತೋರಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಾಗೇಪಲ್ಲಿ ಶಾಸಕ ಶ್ರೀ ಎಸ್.ಎನ್. ಸುಬ್ಬಾರೆಡ್ಡಿ ಅವರು, “ಬಾಯರ್ ನ ಐಜಲ್ ಯೋಜನೆಯು ಚಿಕ್ಕಬಳ್ಳಾಪುರದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಿದ್ದು, ಇದೊಂದು ಶ್ಲಾಘನೀಯ ಕ್ರಮವಾಗಿದೆ. ಖಾಸಗಿ ವಲಯದ ಇಂತಹ ಯೋಜನೆಗಳು ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಸರ್ಕಾರವು ಇಂತಹ ಯೋಜನೆಗಳನ್ನು ಬೆಂಬಲಿಸಲು ಬದ್ಧವಾಗಿದೆ ಮತ್ತು ಬಾಯರ್ ನಂತಹ ಖಾಸಗಿ ಕಂಪನಿಗಳ ಪ್ರಯತ್ನಗಳನ್ನು ಸ್ವಾಗತಿಸುತ್ತದೆ ” ಎಂದು ಹೇಳಿದರು.
ಐಜಲ್ ಯೋಜನೆಯ ಮೂಲಕ ಸ್ಥಳೀಯರಿಗೆ ಈ ಕೇಂದ್ರಗಳನ್ನು ನಿರ್ವಹಿಸಲು ಮತ್ತು ನಿರ್ವಹಣೆ ಮಾಡಲು ತರಬೇತಿಯನ್ನು ಒದಗಿಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಗಳ ಮೂಲಕ ನೀರನ್ನು ಒದಗಿಸಲಾಗುತ್ತದೆ ಮತ್ತು ಶುದ್ಧ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ತರಬೇತಿ ಪಡೆದ ತಂತ್ರಜ್ಞರ ಜಾಲವೂ ಲಭ್ಯವಿದೆ. ಯೋಜನೆಯ ಯಶಸ್ಸನ್ನು ಮಾನಿಟರಿಂಗ್ ಆಂಡ್ ಇವ್ಯಾಲ್ಯೂವೇಷನ್ ಚೌಕಟ್ಟಿನ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
ಈ ಕುರಿತು ಸೇಫ್ ವಾಟರ್ ನೆಟ್ವರ್ಕ್ ನ ಭಾರತದ ನಿರ್ದೇಶಕ ರವೀಂದ್ರ ಸೇವಕ್ ಅವರು, “ಈ ಜಲ ಕೇಂದ್ರದ ವಿಶೇಷತೆಯೆಂದರೆ ಇದನ್ನು ಸ್ವ-ಸಹಾಯ ಗುಂಪುಗಳು ನಿರ್ವಹಿಸುತ್ತವೆ. ತಂತ್ರಜ್ಞಾನದ ಬಳಕೆ ಮತ್ತು ಸೇವೆಗೆ ಸಣ್ಣ ಶುಲ್ಕ ವಿಧಿಸುವುದರಿಂದ ಈ ಯೋಜನೆಯು ದೀರ್ಘಾವಧಿವರೆಗೆ ಕಾರ್ಯನಿರ್ವಹಿಸಲಿದೆ. ಬಾಯರ್ ಸಂಸ್ಥೆ ಜೊತೆಗಿನ ಪಾಲುದಾರಿಕೆಯ ಮೂಲಕ ಇನ್ನು 89 ಜಲ ಕೇಂದ್ರಗಳನ್ನು ಸ್ಥಾಪಿಸಲು ನಾವು ಸಂತೋಷ ಪಡುತ್ತೇವೆ” ಎಂದು ಹೇಳಿದರು.
ಬಾಯರ್ ನ ಈ ಯೋಜನೆಯು ಶುದ್ಧ ನೀರಿನ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಐಜಲ್ ಕೇಂದ್ರಗಳು ಕೇವಲ ಜನ ಜೀವನಕ್ಕೆ ಮಾತ್ರ ಸಹಾಯ ಮಾಡುವುದಿಲ್ಲ, ಜೊತೆಗೆ ಸಮಾಜವು ಸಮೃದ್ಧವಾಗಿ ಬೆಳೆಯಲು ದಾರಿ ಮಾಡಿಕೊಡುತ್ತವೆ.