ಬೀದರ್: ರೈತರೊಬ್ಬರ ಮೇಲೆ ಸಿದ್ದಶ್ರೀ ಬ್ಯಾಂಕ್ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಸಾಲದ ಕಂತಿನ ಹಣ ವಸೂಲಿಗೆ ಬಂದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದಲ್ಲಿ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಾಜಕುಮಾರ್ ನಾಗಪ್ಪ ಮಟ್ಟೆ ಹಲ್ಲೆಗೊಳಗಾದ ರೈತ ಎನ್ನಲಾಗಿದೆ. ಗಾಯಗೊಂಡಿರುವ ರೈತ ರಾಜಕುಮಾರ್ ಹುಲಸೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕುಮಾರ್, ಭಾಲ್ಕಿಯಲ್ಲಿರುವ ಸಿದ್ಧಶ್ರೀ ಬ್ಯಾಂಕ್ನಲ್ಲಿ 39 ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ, ಇಲ್ಲಿಯವರೆಗೆ ಪ್ರತಿ ವಾರ 835 ರೂ. ಕಂತಿನಂತೆ 36 ರಿಂದ 37 ಸಾವಿರ ಸಾಲ ಮರು ಪಾವತಿ ಮಾಡಿದ್ದಾರಂತೆ. ಇನ್ನು ಕೇವಲ 3 ಕಂತಿನ ಸಾಲ ಉಳಿದಿದ್ದು, ಸೂಕ್ತ ಸಮಯದಲ್ಲಿ ಪಾವತಿಸಿದಿದ್ದಕ್ಕೆ ಬ್ಯಾಂಕ್ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಣ ಕೊಡ್ತೀನಿ ಅಂದರೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಜಮೀನಿನಲ್ಲಿ ನೇಗಿಲು ಹೊಡಿಯುತ್ತಿರುವ ವೇಳೆ ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ರೈತ ಆರೋಪಿಸಿದ್ದಾರೆ. ನಾಲ್ವರಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮೆಹಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.