ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬಂದ ನಂತರ, ಸ್ಪಿನ್ ದಿಗ್ಗಜ ಆರ್ ಅಶ್ವಿನ್ (R Ashwin) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ತಮಿಳುನಾಡು ತಂಡದ ಪರ ದೇಶಿ ಕ್ರಿಕೆಟ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಟೂರ್ನಿಯಲ್ಲಿ ಅವರು ದಿಂಡಿಗಲ್ ಡ್ರ್ಯಾಗನ್ಸ್ (Dindigul Dragons) ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ದಂಡ ಕಟ್ಟಿದ್ದ ಆರ್ ಅಶ್ವಿನ್, ಇದೀಗ ಮತ್ತೊಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ. ಆರ್ ಅಶ್ವಿನ್ ಮತ್ತು ಅವರ ನಾಯಕತ್ವದ ದಿಂಡಿಗಲ್ ಡ್ರ್ಯಾಗನ್ಸ್ ತಂಡದ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬಂದಿದೆ.
ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯ ಎಂಟು ತಂಡಗಳಲ್ಲಿ ಒಂದಾಗಿರುವ ಸೀಚಮ್ ಮದುರೈ ಪ್ಯಾಂಥರ್ಸ್ ತಂಡವು, ಆರ್ ಅಶ್ವಿನ್ ಮತ್ತು ಅವರ ದಿಂಡಿಗಲ್ ಡ್ರ್ಯಾಗನ್ಸ್ ತಂಡವು ಜೂನ್ 14ರಂದು ಸೇಲಂನ ಎಸ್ಸಿಎಫ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಟಿಎನ್ಪಿಎಲ್ಗೆ ಈ ತಂಡ ಲಿಖಿತ ದೂರು ನೀಡಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಟಿಎನ್ಪಿಎಲ್ಗೆ ನೀಡಿದ ಲಿಖಿತ ದೂರಿನಲ್ಲಿ, ಆರ್ ಅಶ್ವಿನ್ ಮತ್ತು ಅವರ ತಂಡವು ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ರಾಸಾಯನಿಕಗಳಿಂದ ಸಂಸ್ಕರಿಸಿದ ಟವೆಲ್ಗಳನ್ನು ಬಳಸಿದೆ ಎಂದು ಮದುರೈ ಪ್ಯಾಂಥರ್ಸ್ ಆರೋಪಿಸಿದೆ. “ಪುನರಾವರ್ತಿತ ಎಚ್ಚರಿಕೆಗಳ” ಹೊರತಾಗಿಯೂ ಚೆಂಡು ವಿರೂಪಗೊಳಿಸುವುದು ಮುಂದುವರಿಯಿತು ಎಂದು ಅವರು ಬರೆದಿದ್ದಾರೆ.
ಟಿಎನ್ಪಿಎಲ್ ಸಿಇಓ ಪ್ರತಿಕ್ರಿಯೆ ಏನು?
ವರದಿಯಲ್ಲಿ ತಿಳಿಸಿರುವಂತೆ, ಟಿಎನ್ಪಿಎಲ್ ಸಿಇಒ ಪ್ರಸನ್ನ ಕಣ್ಣನ್, ಯಾವುದೇ ತಕ್ಷಣದ ಆರೋಪವನ್ನು ನಿರಾಕರಿಸಿದ್ದಾರೆ. ಅಶ್ವಿನ್ ಮತ್ತು ದಿಂಡಿಗಲ್ ಫ್ರಾಂಚೈಸಿ ವಿರುದ್ಧದ ಆರೋಪಗಳನ್ನು ಬೆಂಬಲಿಸಲು ಪುರಾವೆಗಳನ್ನು ಒದಗಿಸುವಂತೆ ಅವರು ಮಧುರೈ ಪ್ಯಾಂಥರ್ಸ್ ಅನ್ನು ಒತ್ತಾಯಿಸಿದ್ದಾರೆ.
“ಅವರು ದೂರು ದಾಖಲಿಸಿದ್ದಾರೆ, ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಪಂದ್ಯದ 24 ಗಂಟೆಗಳ ಒಳಗೆ ದೂರುಗಳನ್ನು ದಾಖಲಿಸಬೇಕಾಗಿದ್ದರೂ, ನಾವು ಅದನ್ನು ಸ್ವೀಕರಿಸಿದ್ದೇವೆ ಮತ್ತು ಅವರ ಆರೋಪಗಳಿಗೆ ಪುರಾವೆ ಒದಗಿಸುವಂತೆ ಕೇಳಿದ್ದೇವೆ” ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.
“ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇದ್ದರೆ ನಾವು ಸ್ವತಂತ್ರ ಸಮಿತಿ ರಚಿಸುತ್ತೇವೆ. ಸಾಕಷ್ಟು ಪುರಾವೆಗಳಿಲ್ಲದೆ, ಆಟಗಾರ ಅಥವಾ ಫ್ರಾಂಚೈಸಿಯ ವಿರುದ್ಧ ಅಂತಹ ಆರೋಪಗಳನ್ನು ಹೊರಿಸುವುದು ಸರಿಯಲ್ಲ. ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸದಿದ್ದರೆ, ಮಧುರೈ ಪ್ಯಾಂಥರ್ಸ್ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಮಳೆಗಾಲಕ್ಕೆ ಹೊಂದಿಕೆಯಾಗುವ ಲೀಗ್ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಅಂಪೈರ್ಗಳ ಮುಂದೆ ಚೆಂಡನ್ನು ಒಣಗಿಸಲು ಲೀಗ್ ಒದಗಿಸಿದ ಟವೆಲ್ಗಳನ್ನು ಬಳಸಲು ಅನುಮತಿ ನೀಡಿದೆ ಎಂದು ಪ್ರಸನ್ನ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.