ವಾಲ್ಮೀಕಿ, ಮೂಡಾ ಹಗರಣಗಳ ಕಳಂಕದಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಹೊರ ಬಂದಿಲ್ಲ. ಈ ಬಹುಕೋಟಿ ಗೋಲ್ಮಾಲ್ ಗಳ ಬೀಸುವ ದೊಣ್ಣೆಯಿಂದ ಪಾರಾಗಲು ಹೆಣಗುತ್ತಿರುವ ಆಡಳಿತದ ವಿರುದ್ಧವೀಗ ಮತ್ತೊಂದು ಹೊಸ ಬಾಂಬ್ ಸ್ಫೋಟಿಸಿದೆ. ಹಾಗಂತಾ ಇದು ವಿಪಕ್ಷಗಳು ಬಹಿರಂಗ ಮಾಡಿದ ದೊಡ್ಡ ಹಗರಣವಲ್ಲ, ಬದಲಿಗೆ ಸ್ವಪಕ್ಷದ ಶಾಸಕರೇ ಜಗತ್ತಿನ ಮುಂದೆ ತಮ್ಮದೇ ಪಕ್ಷದ ರಾದ್ಧಾಂತವನ್ನು ಜಗತ್ ಜಾಹೀರು ಮಾಡಿ ಸುದ್ದಿಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಾಲಿಗೀಗ ಬಿಆರ್ ಪಾಟೀಲ್ ಬಿಸಿತುಪ್ಪವಾಗಿದ್ದಾರೆ.
ಕೈ ಬೆಚ್ಚಗೆ ಮಾಡಿದಿದ್ರೆ ಸಿಗೋದಿಲ್ವಾ ಸೂರಿನ ಭಾಗ್ಯ
ಜಮೀರ್ ಅಹಮದ್ ಇಲಾಖೆಯಲ್ಲಿ ಏನಿದು ಹಗರಣ
ವಸತಿ ಹೀನರಿಗೆ ನೆರವಾಗಲೆಂದೇ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ರಾಜ್ಯದ ವಸತಿ ಸಚಿವ ಜಮೀರ್ ಅಹ್ಮದ್ ರ ಸಾರಥ್ಯದಲ್ಲಿರುವ ಈ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪವನ್ನೀಗ ಖುದ್ದು ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಮಾಡಿದ್ದಾರೆ.
ಹೌದು, ಆಳಂದದ ಶಾಸಕರಾಗಿರುವ ಪಾಟೀಲರು, ದುಡ್ಡುಕೊಟ್ಟವರಿಗಷ್ಟೇ ಸೂರಿನ ಭಾಗ್ಯ ಈ ಸರ್ಕಾರದಲ್ಲಿ ಲಭಿಸುತ್ತಿಗದೆ ಅಂತಾ ನೇರ ಆರೋಪಿಸಿದ್ದಾರೆ. ಅಷ್ಟಕ್ಕೂ ಖುದ್ದು ಬಿ ಆರ್ ಪಾಟೀಲರೇ, ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಅವರಿಗೆ ಕರೆ ಮಾಡಿ ದುಡ್ಡುಕೊಟ್ರಷ್ಟೇ ಮನೆ ನೀಡ್ತಿದ್ದೀರಾ ಅಂತಾ ಮಾತನಾಡಿರುವ ಆಡಿಯೋವನ್ನೂ ಸಾಕ್ಷಿಯಾಗಿ ರಿಲೀಸ್ ಮಾಡಿದ್ದಾರೆ.
ಸಿದ್ದರಾಮಯ್ಯ ಆಪ್ತನ ವಿರುದ್ಧವೇ ಬಾಂಬ್
ಬಿ ಆರ್ ಪಾಟೀಲ್ ಆರೋಪ ಸರಣಿ ಇದೇ ಮೊದಲಲ್ಲ
ಭೋಜರಾಜ್ ರಾಮಚಂದ್ರಪ್ಪ ಪಾಟೀಲ್. ಅಂದ್ರೆ ನಿಜಕ್ಕೂ ಯಾರೊಬ್ಬರಿಗೂ ಅರ್ಥವಾಗಲಿಕ್ಕಿಲ್ಲ. ಆದ್ರೆ ಬಿಆರ್ ಪಾಟೀಲ್ ಅಂದ್ರೆ ಸಾಕು ಥಟ್ ಅಂತಾ ನೆನಪಾಗಿಬಿಡ್ತಾರೆ. ಕಲ್ಬುರ್ಗಿಯ ಆಳಂದದ ಶಾಸಕರಾಗಿರುವ ಬಿಆರ್ ಪಾಟೀಲ್ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಕಟು ಸತ್ಯಗಳನ್ನು ಬಯಲಿಗೆಳೆಯುತ್ತಲೇ ಬರ್ತಿದ್ದಾರೆ.
ಸರ್ಕಾರ ರಚನೆ ಹೊಸತರಲ್ಲೇ, ಸಚಿವರು, ಶಾಸಕರಿಗೆ ಮರ್ಯಾದೆ ನೀಡ್ತಿಲ್ಲ ಅಂತಾ ಆರೋಪಿಸಿ 10ಕ್ಕೂ ಹೆಚ್ಚು ಜನಪ್ರತಿನಿಧಿಗಳ ಸಹಿ ಸಂಗ್ರಹಿಸಿ ಪತ್ರ ಬರೆದಿದ್ರು. ಇದೇ ಕಾರಣ ಮುಂದಿಟ್ಟುಕೊಂಡು ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆಯೂ ಪಾಟೀಲ್ ಆಗ್ರಹಿಸಿದರು. ಇನ್ನು ವಿಧಾನಸಭೆಯಲ್ಲಿ ತಾವು ಕೇಳಿದ್ದ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಉತ್ತರಿಸೋ ಬದಲು ಕೃಷ್ಣ ಬೈರೇಗೌಡ ಉತ್ತರಿಸಿದ್ದಕ್ಕೆ ಕೆರಳಿದ್ದ ಬಿಆರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ರು.
ಉಳಿದಂತೆ 2024ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ಸಂಪುಟ ಸಭೆಯ ನಿರ್ಣಯಗಳ ವಿರುದ್ಧವೇ ಅಸಮಾಧಾನ ಹೊರಹಾಕಿದ್ರು. ಕೆಕೆಆರ್ ಡಿಬಿಯಲ್ಲಿ ಪ್ರಭಾವಿ ಸಚಿವರು, ಶಾಸಕರಿಗೆ ಸಿಂಹಪಾಲು ಅನುದಾನ ಮೀಸಲಾಗ್ತಿದೆ ಅಂತಲೂ ಗುಡುಗಿದ್ರು. ಇದರ ಬೆನ್ನಲ್ಲೇ ಇದೀಗ ಆಡಿಯೋ ಬಾಂಬ್ ಹಾಕಿರುವ ಪಾಟೀಲರು, ನೇರ ಸಿದ್ದರಾಮಯ್ಯರ ಪರಮಾಪ್ತ ಜಮೀರ್ ಅಹ್ಮದ್ ರತ್ತಲೇ ಬೊಟ್ಟು ಮಾಡಿದ್ದಾರೆ. ಈ ನಡುವೆ, ಬಿಆರ್ ಪಾಟೀಲರ ಆಡಿಯೋವನ್ನೇ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಸಂಘಟಿತ ಹೋರಾಟಕ್ಕೆ ಪ್ಲ್ಯಾನ್ ಮಾಡ್ತಿವೆ.
ಅತ್ತ ಕಾಂಗ್ರೆಸ್ ಹೈಕಮಾಂಡ್ ಕೂಡಾ ಪಾಟೀಲರ ಆರೋಪದ ವರದಿ ಕೇಳಿದೆ. ಒಟ್ನಲ್ಲಿ, ರಾಜ್ಯ ಕಾಂಗ್ರೆಸ್ ನಲ್ಲೀಗ ಬಿಆರ್ ಪಾಟೀಲ್ ಸ್ವಪಕ್ಷದ ವಿಪಕ್ಷ ನಾಯಕ ಅನ್ನೋ ಶ್ರೇಯ ಗಿಟ್ಟಿಸ್ತಿದ್ದಾರೆ. ಹಾಗಂತಾ ಈ ಆರೋಪದ ತನಿಖೆಯಾಗುತ್ತಾ, ಸೂರಿಗಾಗಿ ಕಾಸು ಆರೋಪ ನಿಜಕ್ಕೂ ಸತ್ಯವಾ ಅನ್ನೋದು ಬಹಿರಂಗವಾಗುತ್ತಾ ಅನ್ನೋದು ಈಗಿರುವ ಪ್ರಶ್ನೆ.