ವಿಶಾಖಪಟ್ಟಣಂ: ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿ ನಡುವೆ ನಡೆದ ಜಗಳವು 8 ತಿಂಗಳ ಗರ್ಭಿಣಿ ಪತ್ನಿಯ ಸಾವಿನೊಂದಿಗೆ ಅಂತ್ಯವಾಗಿದೆ(Murder News). ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಅನುಷಾ(27) ಮತ್ತು ಜ್ಞಾನೇಶ್ವರ್(28) ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ವೈವಾಹಿಕ ವಿವಾದಕ್ಕೆ ಸಂಬಂಧಿಸಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಸಿಟ್ಟಿನ ಭರದಲ್ಲಿ ಜ್ಞಾನೇಶ್ವರ್ ಇನ್ನೇನು ಕೆಲವೇ ವಾರಗಳಲ್ಲಿ ಹೆರಿಗೆಯಾಗಬೇಕಿದ್ದ ಪತ್ನಿ ಅನುಷಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಜ್ಞಾನೇಶ್ವರ್ ಅವರು ಸಾಗರ್ ನಗರ ವ್ಯೂಪಾಯಿಂಟ್ ಬಳಿ ಫಾಸ್ಟ್ ಫುಡ್ ಸ್ಟಾಲ್ ನಡೆಸುತ್ತಿದ್ದರು. ಇವರು ಮತ್ತು ಅನುಷಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಅನುಷಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, 2 ವರ್ಷಗಳ ಹಿಂದೆ ಮದುವೆಯಾದ ಜ್ಞಾನೇಶ್ವರ್ ಮತ್ತು ಅನುಷಾ ಮಧುವಾಡಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸತೊಡಗಿದ್ದರು.
ಸೋಮವಾರ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಇದು ತಾರಕಕ್ಕೇರುತ್ತಿದ್ದಂತೆ ಆಕ್ರೋಶಭರಿತನಾಗಿದ್ದ ಜ್ಞಾನೇಶ್ವರ್ ಬಟ್ಟೆಯೊಂದರಿಂದ ಅನುಷಾಳ ಕುತ್ತಿಗೆಯನ್ನು ಬಿಗಿದಿದ್ದು, ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಸ್ನೇಹಿತರು ಮತ್ತು ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿದ್ದ ಆತ, ಅನುಷಾ ಅನಾರೋಗ್ಯದಿಂದ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾನೆ. ಎಲ್ಲರೂ ಸೇರಿ ಆಕೆಯನ್ನು ಆಸ್ಪತ್ರೆಗೆ ರವಾನಿಸಿದರಾದರೂ ಅಷ್ಟರಲ್ಲೇ ಆಕೆ ಅಸುನೀಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಅನುಮಾನಗೊಂಡ ಆಕೆಯ ಕುಟುಂಬ ಸದಸ್ಯರು ಜ್ಞಾನೇಶ್ವರ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಜ್ಞಾನೇಶ್ವರ್ ಪೊಲೀಸರ ಮುಂದೆ ಶರಣಾಗಿದ್ದು, ಪತ್ನಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಕೆಜಿಎಚ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಾಗಿದ್ದ ಅನುಷಾ ಪತಿಯ ಸಿಟ್ಟಿಗೆ ಬಲಿಯಾಗಿದ್ದು, ಎರಡು ಜೀವಗಳು ನಷ್ಟವಾದಂತಾಗಿದೆ.