ಅಪಘಾತವೆಸಗಿದ ಖಾಸಗಿ ಬಸ್ ವಿರುದ್ಧ ರೊಚ್ಚಿಗೆದ್ದು ಕಲ್ಲು ತೂರಿ ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು ಆರು ತಿಂಗಳ ಬಳಿಕ ಸಮಿತ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ 2024ರ ನವೆಂಬರ್ 11ರಂದು ಮೂಡಬಿದಿರೆಯಲ್ಲಿ ನಡೆದಿತ್ತು. ಓವರ್ ಟೇಕ್ ಭರದಲ್ಲಿ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಖಾಸಗಿ ಬಸ್ ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ತೋಡಾರ್ ಬಳಿ ನಡೆದಿತ್ತು. ಅಲ್ಲಿದ್ದ ವಿದ್ಯಾರ್ಥಿಗಳು ಬಸ್ ನ ಗಾಜುಗಳನ್ನು ಒಡೆದು ಹಾನಿಮಾಡಿದ್ದರು. ಆ ವೇಳೆ ಸುಮಿತ್ ರಾಜ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಕುರಿತು ಬಸ್ ಮಾಲೀಕ ರಫೀಕ್ ಈ ಕುರಿತು ಮೂಡಬಿದಿರೆ ಠಾಣೆಗೆ ದೂರು ನೀಡಿದ್ದರು. ಗಾಯಾಳುಗಳಿಗೆ ಬಸ್ ಮಾಲೀಕನಿಂದ ಸಮಿತ್ ರಾಜ್, ಕಾನೂನು ಬಾಹಿರವಾಗಿ ಪರಿಹಾರ ತೆಗೆಸಿಕೊಟ್ಟಿದ್ದ ಎಂಬ ಆರೋಪ ಕೂಡ ಇದೆ. ಬೆದರಿಕೆ ಹಾಕಿ ಐದು ಲಕ್ಷ ಪರಿಹಾರ ತೆಗೆಸಿಕೊಟ್ಟಿದ್ದ ಆರೋಪವೂ ಸಮಿತ್ ಮೇಲಿತ್ತು. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತ್ ರಾಜ್ ನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.