ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಹಾಗೂ ಮಕ್ಕಳನ್ನು ಕೊಲೆ ಮಾಡಲು ಕಿರಾತಕ ಪತ್ನಿ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತಾಳಿ ಕಟ್ಟಿದ ಗಂಡ, ಮಕ್ಕಳಿಗೆ ಆಹಾರದಲ್ಲಿ ವಿಷದ ಮಾತ್ರೆ ಹಾಕಿದ್ದಳು ಎನ್ನಲಾಗಿದೆ. ವಿಷಮಿಶ್ರಿತ ಆಹಾರದಿಂದಾಗಿ ಪತಿ, ಮಕ್ಕಳು, ಅತ್ತೆ, ಮಾವ ಅಸ್ವಸ್ಥರಾಗಿದ್ದರು. ವಿಷಾಹಾರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ವೈದ್ಯರು ವರದಿ ನೀಡಿದ್ದರು.
ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದ ಚೈತ್ರಾ, ಗಜೇಂದ್ರ ಎಂಬುವವರಿಗೆ ವಿವಾಹವಾಗಿದ್ದಳು. ಇವರಿಬ್ಬರು 11 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಪತ್ನಿ ಚೈತ್ರಾ 3 ವರ್ಷಗಳಿಂದ ಕೆರಳೂರಿನ ಪುನೀತ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ.
ಅನೈತಿಕ ಸಂಬಂಧ ಬಯಲಾಗಿ ರಾಜೀ ಸಂಧಾನ ಮಾಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಿಂದ ಅದೇ ಗ್ರಾಮದ ಶಿವು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆದರೆ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಗಜೇಂದ್ರ, 8 ಮತ್ತು 10 ವರ್ಷದ ಮಕ್ಕಳು, ಅತ್ತೆ, ಮಾವನನ್ನು ಕೊಲೆ ಮಾಡಲು ಪ್ಲ್ಯಾನ್ ರೂಪಿಸಿದ್ದಾಳೆ. ಊಟ, ಕಾಫಿಯಲ್ಲಿ ವಿಷದ ಮಾತ್ರೆ ಹಾಕಿ ಕೊಲೆಗೆ ಯತ್ನಿಸಿದ್ದಾಳೆ.
ಚೈತ್ರಾಳೇ ಊಟದಲ್ಲಿ ವಿಷದ ಮಾತ್ರೆ ಹಾಕಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಅನೈತಿಕ ಸಂಬಂಧ ಹೊಂದಿದ್ದ ಶಿವು ಜೊತೆ ಸೇರಿ ಪತಿ ಹಾಗೂ ಕುಟುಂಬ ಮುಗಿಸಲು ಪ್ಲಾನ್ ಮಾಡಿದ್ದು ಈಗ ಬಹಿರಂಗವಾಗಿದೆ. ಈ ವೇಳೆ ಪತ್ನಿಯೇ ಊಟಕ್ಕೆ ವಿಷ ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ಗಜೇಂದ್ರ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಚೈತ್ರಾಳನ್ನು ವಶಕ್ಕೆ ಪಡೆದಿದ್ದಾರೆ.