ಬೆಂಗಳೂರು : ಆ್ಯಂಬುಲೆನ್ಸ್ ಸಿಬ್ಬಂದಿಗಳು ಶವದ ಮೇಲಿದ್ದ 4 ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ ಕದ್ದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೃತ ಮಹಿಳೆಯ ಪತಿ ದೂರು ದಾಖಲಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಶವವನ್ನು ಫ್ರೀಜ್ನಲ್ಲಿಟ್ಟಾಗ ಇದ್ದ ಚಿನ್ನ ಮನೆಗೆ ಬಂದಾಗ ಇರಲಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ಸಿಬ್ಬಂದಿಗಳೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹುಸೇನ್, ಮೋಹಿನ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಮಹಿಳೆಯ ಪತಿ ಸಭಾನಾಯಗನ್ ದೂರು ನೀಡಿದ್ದಾರೆ.
ಸಭಾನಾಯಗನ್ ಅವರ ಪತ್ನಿ ಜ್ಞಾನ ಅವರು ಕುಸಿದು ಬಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ವಾಭಾವಿಕ ಸಾವು ಎಂದು ಮರಣೋತ್ತರ ವರದಿ ಬಂದಿತ್ತು. ಶವ ಸಾಗಿಸಲು ಕುಟುಂಬಸ್ಥರು ಆ್ಯಂಬುಲೆನ್ಸ್ಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯ ಡಾ. ರಾಜು ಎಂಬುವವರು ಸಂತೋಷ್ ಆಂಬುಲೆನ್ಸ್ ಅವರ ನಂಬರ್ ಕೊಟ್ಟಿದ್ದರು. ನಂತರ ಸಂತೋಷ್ ಆ್ಯಂಬುಲೆನ್ಸ್ ಸಿಬ್ಬಂದಿಗಳು ಹುಸೇನ್ ಹಾಗೂ ಮೊಹಿನ್ ಎಂಬುವವರನ್ನು ಕಳಿಸಿಕೊಟ್ಟಿದ್ದರು.
ಬಳಿಕ ಶವವನ್ನು ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ಯುವಾಗ ಟಯರ್ ಪಂಚರ್ ಆಗಿದ್ದು, ಪಂಚರ್ ಹಾಕುವ ವೇಳೆ ಚಿನ್ನಾಭರಣ ಕದ್ದಿರುವ ಸಾಧ್ಯತೆಯಿದೆ. ಮನೆಗೆ ಬಂದು ಶವ ಇಳಿಸಿ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಗಾಯ್ ರಾಜ್ ಹಣ ಕೊಟ್ಟು ಕಳಿಸಿದ್ದ. ಸ್ವಲ್ಪ ಸಮಯದ ಬಳಿಕ ಮಾಂಗಲ್ಯ ಸರ ಬಿಟ್ಟು ಉಳಿದ ಆಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆ್ಯಂಬುಲೆನ್ಸ್ ಸಿಬ್ಬಂದಿಗಳು ಕದ್ದಿದ್ದಾರೆಂದು ಆರೋಪಿಸಲಾಗಿದ್ದು, ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.