ನವದೆಹಲಿ: ಭಾರತ ಈಗಾಗಲೇ ಪಾಕಿಸ್ತಾನದೊಂದಿಗೆ ಯುದ್ಧ ಆರಂಭಿಸಿದೆ. ಶಸ್ತ್ರಸ್ತ್ರಗಳನ್ನು ಉಪಯೋಗಿಸಿದೆ, ಇನ್ನುಳಿದ ಎಲ್ಲ ಮಾರ್ಗಗಳಿಂದಲೂ ಪಾಕ್ ಗೆ ಭಾರತ ಏಟು ನೀಡುತ್ತಲೇ ಇದೆ.
ಪಹಲ್ಗಾಮ್ ನಲ್ಲಿ (Pahalgam Attack) ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನ ಭಾರತೀಯರು ಸಾವನ್ನಪ್ಪಿದ್ದರು. ಹೀಗಾಗಿ ಭಾರತ ಕೆಂಡಾಮಂಡಲವಾಗಿದೆ. ಹೀಗಾಗಿ ಯುದ್ಧದ ಭೀತಿ ಆವರಿಸಿದೆ. ಈಗಾಗಲೇ ಸಿಂಧೂ ನದಿ ಬಂದ್ ಮಾಡುವುದು ಸೇರಿದಂತೆ ಹಲವಾರು ಕಠಿಣ ನಿಯಮಗಳನ್ನು ಕೈಗೊಂಡಿರುವ ಭಾರತ ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈಗ ಪಾಕಿಸ್ತಾನದ ವಿಮಾನಗಳನ್ನು ಭಾರತೀಯ ವಾಯುಪ್ರದೇಶದಿಂದ ನಿರ್ಬಂಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದ ಎಲ್ಲ ನೋಂದಾಯಿತ ಮತ್ತು ಮಿಲಿಟರಿ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಭಾರತ ವಾಯುಪಡೆಗೆ (NOTAM) ನೋಟಿಸ್ ನೀಡಿದೆ.
ಭಾರತವು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲಾ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವ ನೋಟಮ್ (ವಾಯುಪಡೆಗಳಿಗೆ ಸೂಚನೆ) ಕೊಟ್ಟಿದೆ.
ಈ NOTAMನಂತೆ, ಈ ನಿರ್ಬಂಧ ಏಪ್ರಿಲ್ 30ರಿಂದ ಮೇ 23ರ ವರೆಗೆ ಜಾರಿಯಲ್ಲಿರುತ್ತದೆ. ಈ ವೇಳೆ ಪಾಕಿಸ್ತಾನಿ ವಿಮಾನಗಳು ಭಾರತೀಯ ವಾಯು ಪ್ರದೇಶ ಪ್ರವೇಶಿಸುವಂತಿಲ್ಲ. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳು ಕೌಲಾಲಂಪುರದಂತಹ ಆಗ್ನೇಯ ಏಷ್ಯಾದ ತಾಣಗಳನ್ನು ತಲುಪಲು ಚೀನಾ ಅಥವಾ ಶ್ರೀಲಂಕಾದಂತಹ ದೇಶಗಳ ಮೂಲಕ ದೀರ್ಘ ಮಾರ್ಗಗಳ ಸಹಾಯ ಪಡೆಯಬೇಕಾಗುತ್ತದೆ.