ನವದೆಹಲಿ: ಈ ಹಿಂದೆ ಚೀನಾದಲ್ಲಿ ನಿಂತು ಈಶಾನ್ಯ ರಾಜ್ಯಗಳ (India’s Northeast States) ಬಗ್ಗೆ ಮಾತನಾಡಿದ ಭಾರತದ ಆಂತರಿಕ ವಿಚಾರದಲ್ಲಿ ಮೂಗುತೂರಿಸಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್, ಈಗ ನೇಪಾಳದ ಜೊತೆಗೂ ಈಶಾನ್ಯ ವಿಚಾರ ಪ್ರಸ್ತಾಪಿಸಿ ಉದ್ಧಟತನ ಮೆರೆದಿದ್ದಾರೆ.
ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಭಾರತದ ಈಶಾನ್ಯದ ಏಳು ರಾಜ್ಯಗಳನ್ನು ಒಳಗೊಂಡಂತೆ ಒಂದು ಸಮಗ್ರ ಆರ್ಥಿಕ ಸಹಕಾರ ಯೋಜನೆಯನ್ನು ರೂಪಿಸಬೇಕಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ನೇಪಾಳದ ಸಂಸತ್ತಿನ ಉಪ ಸಭಾಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಯೂನುಸ್, ಜಲವಿದ್ಯುತ್, ಆರೋಗ್ಯ ಮತ್ತು ಸಾರಿಗೆ ಮೂಲಸೌಕರ್ಯಗಳಂತಹ ಕ್ಷೇತ್ರಗಳಲ್ಲಿ ಗಡಿಯಾಚೆಗಿನ ಸಹಕಾರಕ್ಕೆ ಅಪಾರ ಅವಕಾಶಗಳಿವೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಹಂಚಿಕೆಯ ಶಕ್ತಿ ಮತ್ತು ಮೂಲಸೌಕರ್ಯ ಯೋಜನೆಗಳ ಮಹತ್ವವನ್ನು ಒತ್ತಿ ಹೇಳುವ ವೇಳೆ ಅವರು, “ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಭಾರತದ ಈಶಾನ್ಯದ ಏಳು ರಾಜ್ಯಗಳಿಗೆ ಒಂದು ಸಂಯೋಜಿತ ಆರ್ಥಿಕ ಯೋಜನೆ ಇರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಈ ಚರ್ಚೆಯಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದ ನಡುವಿನ ಜಲವಿದ್ಯುತ್ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಗಮನ ಹರಿಸಲಾಯಿತು. ಇತ್ತೀಚೆಗೆ ನಡೆದ ಬಾಂಗ್ಲಾದೇಶ-ನೇಪಾಳ-ಭಾರತ ತ್ರಿಪಕ್ಷೀಯ ವಿದ್ಯುತ್ ಮಾರಾಟ ಒಪ್ಪಂದದ ಮಹತ್ವವನ್ನು ಉಭಯ ದೇಶಗಳು ಒಪ್ಪಿಕೊಂಡವು. ಈ ಒಪ್ಪಂದದ ಮೂಲಕ ನೇಪಾಳವು ಭಾರತದ ವಿದ್ಯುತ್ ಗ್ರಿಡ್ ಅನ್ನು ಬಳಸಿಕೊಂಡು 40 ಮೆಗಾವ್ಯಾಟ್ ಜಲವಿದ್ಯುತ್ ಶಕ್ತಿಯನ್ನು ಬಾಂಗ್ಲಾದೇಶಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಈ ಹಿಂದೆ ಚೀನಾ ಭೇಟಿಯ ಸಂದರ್ಭದಲ್ಲಿ, ಮುಹಮ್ಮದ್ ಯೂನುಸ್ ಅವರು ಬಾಂಗ್ಲಾದೇಶವನ್ನು ಚೀನಾದ ಪ್ರಮುಖ ಪ್ರಾದೇಶಿಕ ಪಾಲುದಾರನಾಗಿ ಸ್ಥಾಪಿಸುವ ಪ್ರಯತ್ನದಲ್ಲಿ ಭಾರತದ ಈಶಾನ್ಯ ರಾಜ್ಯಗಳನ್ನು ಉಲ್ಲೇಖಿಸಿದ್ದರು. “ಭಾರತದ ಪೂರ್ವದ ಏಳು ರಾಜ್ಯಗಳು – ಏಳು ಸಹೋದರಿಯರು – ಭೂಪರಿವೃತವಾಗಿವೆ. ಅವುಗಳಿಗೆ ಸಮುದ್ರವನ್ನು ತಲುಪಲು ಯಾವುದೇ ನೇರ ಮಾರ್ಗವಿಲ್ಲ. ನಾವೇ ಸಮುದ್ರದ ಏಕೈಕ ಪಾಲಕರು” ಎಂದು ಅವರು ಹೇಳಿದ್ದರು. ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಕರೆ ನೀಡುತ್ತಾ, “ಬಾಂಗ್ಲಾದೇಶದಲ್ಲಿ ಉತ್ಪಾದಿಸಿ, ಚೀನಾದಲ್ಲಿ ಮಾರಾಟ ಮಾಡಿ” ಎಂದು ಅವರು ಚೀನಾ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಭಾರತದ ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್, ಭಾರತದ ಆಂತರಿಕ ಭೌಗೋಳಿಕತೆಯ ವಿಚಾರವನ್ನು ಚೀನಾ ಜತೆಗಿನ ಮಾತುಕತೆಯಲ್ಲಿ ಉಲ್ಲೇಖಿಸುವ ಅವಶ್ಯಕತೆಯೇನಿತ್ತು ಎಂದು ಪ್ರಶ್ನಿಸಿದ್ದರು. ಜೊತೆಗೆ ಯೂನುಸ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು.
ಯೂನುಸ್ ಅವರ ಪ್ರಸ್ತುತ ಪ್ರಸ್ತಾಪವು ಈಶಾನ್ಯ ರಾಜ್ಯಗಳನ್ನು ಒಳಗೊಂಡಂತೆ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದರೆ, ಈ ಹಿಂದೆ ಚೀನಾದೊಂದಿಗಿನ ಚರ್ಚೆಯಲ್ಲಿ ಈಶಾನ್ಯ ರಾಜ್ಯಗಳನ್ನು “ಭೂಪರಿವೃತ” ಎಂದು ಕರೆದಿದ್ದು ಭಾರತದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದ ಈ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.