ಫ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಕಾಂತಾರಾ ಚಿತ್ರದ ಉತ್ತಮ ನಟನೆಗೆ “ರಿಷಬ್ ಶೆಟ್ಟಿ ಅತ್ಯುತ್ತಮ ನಟ” ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂಗತಿ ಚಂದನವನಕ್ಕೆ ಭಾರೀ ಖುಷಿ ತಂದಿದೆ. ಈ ಬಾರಿ ಕನ್ನಡ ಚಿತ್ರರಂಗ ಭಾರೀ ಖುಷಿ ಪಡುವಂತಾಗಿದ್ದು, ಒಟ್ಟು 6 ಪ್ರಶಸ್ತಿಗಳು ಕನ್ನಡ ಭಾಷೆಗೆ ಧಕ್ಕಿವೆ. ರಿಷಬ್ ಶೆಟ್ಟಿಗೂ ಮುನ್ನ ಹಲವು ಕನ್ನಡದ ನಟ- ನಟಿಯರು ಕೂಡ ರಾಷ್ಟ್ರಪ್ರಶಸ್ತಿ ಪಡೆದು ಕನ್ನಡಕ್ಕೆ ಹೆಮ್ಮೆಯ ವಿಷಯ.
1973ರಲ್ಲಿ ಕನ್ನಡದ ನಟಿ ನಂದಿನಿ ಭಕ್ತವತ್ಸಲ ಅವರು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ‘ಕಾಡು’ ಚಿತ್ರದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ಒದಗಿ ಬಂದಿತ್ತು. ಶ್ರೀಕೃಷ್ಣ ಆಲನಹಳ್ಳಿ ಬರೆದ ‘ಕಾಡು’ ಕಾದಂಬರಿಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿ ಸಿನಿಮಾ ರಚಿಸಿದ್ದರು. ಈ ಚಿತ್ರದಲ್ಲಿ ನಂದಿನಿ ಭಕ್ತವತ್ಸಲ ತುಂಬಾ ಸೊಗಸಾಗಿ ನಟಿಸಿದ್ದರು.
1975ರಲ್ಲಿ ಎಂ.ವಿ. ವಾಸುದೇವ ರಾವ್ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಬಿ.ವಿ. ಕಾರಂತ್ ನಿರ್ದೇಶನ ಮಾಡಿದ್ದ ‘ಚೋಮನ ದುಡಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಎಂ.ವಿ. ವಾಸುದೇವ ರಾವ್ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು. ಅದು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಸಿನಿಮಾ ಆಗಿತ್ತು. ವಿಶಿಷ್ಟ ಧ್ವನಿ ಹೊಂದಿದ್ದ ವಾಸುದೇವ್ ಅವರ ಅಭಿನಯವೂ ಮನ ಮುಟ್ಟುವಂತಿದ್ದ ಪರಿಣಾಮ ರಾಷ್ಟ್ರ ಮನ್ನಣೆ ದೊರೆತಿತ್ತು.
1986ರಲ್ಲಿ ನಟ ಚಾರುಹಾಸನ್ ಅವರು ‘ತರಬನ ಕಥೆ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ಎಂಬ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಗಿರೀಶ್ ಕಾಸರವಳ್ಳಿ ಈ ಚಿತ್ರದ ನಿರ್ದೇಶನ ಮಾಡಿದ್ದರು. ತಮಿಳು ಚಿತ್ರರಂಗದ ನಟರಾದ ಚಾರುಹಾಸನ್ ಈ ಕನ್ನಡ ಚಿತ್ರದಲ್ಲಿ ನಟಿಸಿ, ಸೈ ಅನಿಸಿಕೊಂಡಿದ್ದರು.
2004ರಲ್ಲಿ ನಟಿ ತಾರಾ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದರು. ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದ ‘ಹಸೀನಾ’ ಚಿತ್ರದಲ್ಲಿನ ಮನೋಜ್ಞವಾದ ಅಭಿನಯಕ್ಕೆ ತಾರಾ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
ಹಿರಿಯ ನಟಿ ಉಮಾಶ್ರೀ ಅವರು ಕೂಡ 2007ರಲ್ಲಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದ ‘ಗುಲಾಬಿ ಟಾಕೀಸ್’ ಚಿತ್ರದಲ್ಲಿನ ನಟನೆಗೆ ಈ ಪ್ರಶಸ್ತಿ ಪಡೆದಿದ್ದರು. ಈ ಚಿತ್ರದಲ್ಲಿ ನಟಿ ಉಮಾಶ್ರೀ ಅವರು ಪರಕಾಯ ಪ್ರವೇಶ ಮಾಡಿದರೇನೋ? ಎನ್ನುವಷ್ಟರ ಮಟ್ಟಿಗೆ ಪಾತ್ರ ಪೋಷಿಸಿದ್ದರು.
2014ರಲ್ಲಿ ನಟ ಸಂಚಾರಿ ವಿಜಯ್ ತಮ್ಮ ಅದ್ಭುತ ಕಲೆಯಿಂದಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿತ್ತು. ತೃತೀಯ ಲಿಂಗಿಯ ಪಾತ್ರದಲ್ಲಿ ಅವರ ಅಭಿನಯ ನೋಡುಗರ ಕಣ್ಣು ತೇವವಾಗಿಸಿದ್ದಂತೂ ಸತ್ಯ. ಬಿ.ಎಸ್. ಲಿಂಗದೇವರು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.
ಇದೀಗ ಮತ್ತೊಂದು ರಾಷ್ಟ್ರ ಪ್ರಶಸ್ತಿ ಕನ್ನಡಕ್ಕೆ ಬಂದಿದ್ದು, ರಿಷಬ್ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಈ ಚಿತ್ರವನ್ನು ನಟನೆಯ ಜೊತೆ ಖುದ್ದು ರಿಷಬ್ ಶೆಟ್ಟಿಯೇ ನಿರ್ದೇಶನ ಕೂಡ ಮಾಡಿದ್ದರು.
ಇವಷ್ಟೇ ಅಲ್ಲದೇ, ಚಂದನವನಕ್ಕೆ ಹಲವಾರು ವಿಭಾಗದಲ್ಲಿ ಪ್ರಶಸ್ತಿಗಳು ಹರಿದು ಬಂದಿವೆ. ಕನ್ನಡದ ಅಪ್ಪು, ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ್ ಸೇರಿದಂತೆ ಹಲವಾರು ನಟರು ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಸಂಗೀತ, ನಿರ್ದೇಶನ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಬಂದಿವೆ. ಹಿರಿಯ ನಟ ಎಚ್.ಜಿ. ದತ್ತಾತ್ರೆಯ(ದತ್ತಣ್ಣ) ಅವರು ಎರಡು ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಡಾ. ರಾಜಕುಮಾರ್ ಅವರ ಗಾಯನಕ್ಕೆ (ನಾದಮಯ) ರಾಷ್ಟ್ರ ಪ್ರಶಸ್ತಿ ಸಂದಿತ್ತು.