ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಮೂಲಕ ಸಂಚಲನ ಮೂಡಿಸಿರುವ ಖ್ಯಾತ ನಟ ವಿಜಯ್ ಈಗ “ವೈ” ಕೆಟಗರಿ ಭದ್ರತೆಯುಳ್ಳ ವಿಐಪಿ!
ಹೌದು, ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಅವರಿಗೆ ಕೇಂದ್ರ ಗೃಹ ಇಲಾಖೆಯು ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಗುಪ್ತಚರ ಬ್ಯೂರೋ ನಡೆಸಿರುವ ಆಂತರಿಕ ಭದ್ರತಾ ಪರಿಶೀಲನೆಯ ಆಧಾರದಲ್ಲಿ ಅವರಿಗೆ ರಾಜ್ಯದಲ್ಲಿ ಈ ವಿಭಾಗದ ಭದ್ರತೆಯನ್ನು ಒದಗಿಸಲಾಗಿದೆ.
ಈ ಕುರಿತು ಕೇಂದ್ರ ಗೃಹ ಇಲಾಖೆಯೇ ಅಧಿಸೂಚನೆ ಹೊರಡಿಸಿದ್ದು, ಅದರಂತೆ, ನಟ, ರಾಜಕಾರಣಿ ವಿಜಯ್ ಅವರಿಗೆ ಇನ್ನು ಮುಂದೆ 8ರಿಂದ 11 ಮಂದಿ ಸಿಆರ್ಪಿಎಫ್ ಯೋಧರು, ಜೊತೆಗೆ ಒಬ್ಬ ಅಥವಾ ಇಬ್ಬರು ಕಮಾಂಡೋಗಳು ದಿನದ 24 ಗಂಟೆಯೂ ಭದ್ರತೆಯನ್ನು ಒದಗಿಸಲಿದ್ದಾರೆ.

ವಿಜಯ್ ಯಾವಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೋ ಅಂತಹ ಸಂದರ್ಭಗಳಲ್ಲಿ ಜನಸಮೂಹವನ್ನು ನಿಯಂತ್ರಿಸುವ ಕೆಲಸವನ್ನೂ ಈ ಭದ್ರತಾ ಸಿಬ್ಬಂದಿ ಮಾಡಲಿದ್ದಾರೆ. ವಿಜಯ್ ಅವರ ಕಾರ್ಯಕ್ರಮಗಳಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿರುವ ಹಿನ್ನೆಲೆಯಲ್ಲಿ ಅವರ ಭದ್ರತೆ, ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವ್ಯಕ್ತಿಯ ಜೀವಕ್ಕಿರುವ ಅಪಾಯದ ಆಧಾರದಲ್ಲಿ ಕೇಂದ್ರ ಸರ್ಕಾರವು X, Y, Z ಮತ್ತು Z+ ಎಂಬ ನಾಲ್ಕು ವಿಧದ ಭದ್ರತೆಯನ್ನು ಒದಗಿಸುತ್ತದೆ. ಈ ನಡುವೆ, ವಿಜಯ್ ಅವರಿಗೆ ಭದ್ರತೆ ಒದಗಿಸಬೇಕೆಂಬ ಯೋಚನೆ ರಾಜ್ಯದ ಡಿಎಂಕೆ ಸರ್ಕಾರಕ್ಕೆ ಬಂದಿಲ್ಲವೇಕೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪ್ರಶ್ನಿಸಿದ್ದಾರೆ. “ಎಐಎಡಿಎಂಕೆ ಪಕ್ಷವು ಬಿಜೆಪಿ ಜತೆ ಮೈತ್ರಿಯಲ್ಲಿದೆಯೋ, ಇಲ್ಲವೋ ಎಂಬುದನ್ನೂ ಪರಿಗಣಿಸದೇ ಕೇಂದ್ರ ಸರ್ಕಾರವು ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿಯವರಿಗೆ ಸಿಆರ್ಪಿಎಫ್ ಭದ್ರತೆ ಒದಗಿಸಿದೆ. ಆದರೆ, ಡಿಎಂಕೆ ಸರ್ಕಾರ ಈ ಬಗ್ಗೆ ಯಾವತ್ತೂ ಯೋಚಿಸಿಯೇ ಇಲ್ಲ” ಎಂದಿದ್ದಾರೆ.
ಹಲವು ಗುಪ್ತಚರ ಸಂಸ್ಥೆಗಳು ಪಳನಿಸ್ವಾಮಿ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅದೇ ರೀತಿ ಈಗ ವಿಜಯ್ ಅವರಿಗೂ ಭದ್ರತೆ ಕಲ್ಪಿಸಲಾಗಿದೆ. ಆದರೆ ರಾಜ್ಯ ಸರ್ಕಾರವೇಕೆ ಈ ಕೆಲಸ ಮಾಡಿಲ್ಲ ಎಂದೂ ಅಣ್ಣಾಮಲೈ ಪ್ರಶ್ನಿಸಿದ್ದಾರೆ.