ಜೈಪುರ: ರಾಜಸ್ಥಾನದ ಜೋಧ್ ಪುರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮನೆಯಲ್ಲಿ ಸಿಲಿಂಡರ್ ಸ್ಫೋಟದ ಬಳಿಕ ರಕ್ಷಣೆ ಮಾಡಿದರೂ ಹಿಜಾಬ್ ತರಲೆಂದು ಮತ್ತೆ ಮನೆಯೊಳಗೆ ಓಡಿದ ಯುವತಿಯು ಮೃತಪಟ್ಟಿದ್ದಾಳೆ. ಸಿಲಿಂಡರ್ ಸ್ಫೋಟದ ಬಳಿಕ ಹೊತ್ತಿಕೊಂಡ ಬೆಂಕಿಯಿಂದಾಗಿ 19 ವರ್ಷದ ಬಾಲಕಿ ಹಾಗೂ 14 ತಿಂಗಳ ಮಗು ಮೃತಪಟ್ಟಿದೆ. ಹಿಜಾಬ್ ತರಲು ಮತ್ತೆ ಮನೆಯೊಳಗೆ ಹೋದ ಯುವತಿ ಸಾದಿಯಾ ಅಗ್ನಿಗಾಹುತಿಯಾಗಿದ್ದಾಳೆ.
ಕಳೆದ ಸೋಮವಾರ ಸಂಜೆ 4:30 ರ ಸುಮಾರಿಗೆ ಗುಲಾಬ್ ಸಾಗರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೊಹಮ್ಮದ್ ಸತ್ತಾರ್ ಚೌಹಾಣ್ ಎಂಬುವರ ಮನೆಯಲ್ಲಿ ಆಹಾರ ಸಿದ್ದಪಡಿಸಲಾಗುತ್ತಿತ್ತು. ಉಮ್ರಾ ಯಾತ್ರೆಗೆ ಹೋಗುವ ಮೊದಲು, ಹೂವಿನ ಆಚರಣೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಮಾಡಬೇಕಾಗಿತ್ತು. ಇಡೀ ಕುಟುಂಬವು ಅತಿಥಿಗಳನ್ನು ಆಹ್ವಾನಿಸಿ ಅವರಿಗೆ ಊಟ ಬಡಿಸಲು ಯೋಜಿಸುತ್ತಿತ್ತು. ಆದರೆ, ಇದೇ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಇದ್ದಕ್ಕಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿ ಅವಘಡಕ್ಕೂ ಮೊದಲು ಸಾದಿಯಾ ಎರಡನೇ ಮಹಡಿಯ ಕೋಣೆಯಲ್ಲಿ ನಮಾಜ್ ಮಾಡುತ್ತಿದ್ದಳು. ಅಗ್ನಿ ದುರಂತದ ಬಳಿಕ ಹೊಗೆ ಆವರಿಸಿಕೊಂಡಿದ್ದು, ಆಕೆ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತಾನು ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಳು. ಕೂಡಲೇ, ಅಗ್ನಿಶಾಮಕ ದಳ ಮತ್ತು ನೆರೆಹೊರೆಯವರು ಅವಳನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
ಇದಾದ ಬಳಿಕ ಪ್ರಾಣ ಉಳಿಯಿತು ಎಂದು ಸಾದಿಯಾ ಸುಮ್ಮನಾಗಿಲ್ಲ. ಅವಳು ಮತ್ತೆ ತನ್ನ ಹಿಜಾಬ್ ತರಲೆಂದು ಒಳಗೆ ಹೋದಾಗ ಉರಿಯುತ್ತಿರುವ ಬಾಗಿಲು ಅವಳ ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಾದಿಯಾಳನ್ನು ಜೋಧ್ ಪುರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.