ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸೇ ಇಲ್ಲ. ಪ್ರಯತ್ನ ನಡೆಸಿದರೆ ಮುಂದುವರೆಸಬಹುದಿತ್ತು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ. ನಮ್ಮನ್ನು ಫುಶ್ ಮಾಡುವವರು ಯಾರು ಇಲ್ಲ. ರಾಜಣ್ಣ ನಾವು ಆಗಾಗ ಸೇರುತ್ತಲೇ ಇರುತ್ತೇವೆ. ಹುಲಿ ಯಾವಾಗಲೂ ಹುಲಿನೇ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ನೋಡಿಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಫಾರ್ಮುಲಾ ಬೇರೆ. ನಮ್ಮದು ಬೇರೆ. ಅವರ ಐಡಿಯಾಲಜಿ ಬೇರೆ, ನಮ್ಮದು ಬೇರೆ. ಬಿಜೆಪಿಗೂ ನಮಗೂ ವ್ಯತ್ಯಾಸ ಇದೆ ಎಂದಿದ್ದಾರೆ.
ಸಿಎಂ, ಆಪ್ತ ಸಚಿವರು ದೆಹಲಿಗೆ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಏನೂ ಸಂದೇಶ ಇಲ್ಲ. ಸಿಎಂ ಜೊತೆ ದೆಹಲಿಗೆ ಹೋಗಿದ್ದೆವು ಅಷ್ಟೇ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದೇವು. ಸಿಎಂ ಕೂಡ ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ನಾವು ಎಲ್ಲರನ್ನೂ ಜನರಲ್ ಆಗಿ ಭೇಟಿ ಮಾಡಿದ್ದೇವೆ. ದೆಹಲಿಗೆ ಹೋದಮೇಲೆ ಆ್ಯಕ್ಟೀವ್ ಆಗುವುದು ಸ್ವಾಭಾವಿಕ. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರವನ್ನು ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಯಾರಿಗೆ ಏನು ಕೊಡಬೇಕು ಅಂತಾ ಹೈಕಮಾಂಡ್ ಗೆ ಗೊತ್ತಿದೆ ಎಂದಿದ್ದಾರೆ.
ಶಾಸಕ ಬಿ.ಆರ್. ಪಾಟೀಲ್ ಹೇಳಿಕೆಯ ವಿಚಾರವೂ ದೆಹಲಿಯಲ್ಲಿ ಚರ್ಚೆಯಾಗಿದೆ. ಆ ಬಗ್ಗೆ ಹೈಕಮಾಂಡ್, ಸಿಎಂ ಜೊತೆ ಮಾತನಾಡಿದೆ. ಅನುದಾನ, ವರ್ಗಾವಣೆ ಅಂತಾ ಹೇಳೋಕೆ ಆಗೋದಿಲ್ಲ. ಕ್ಷೇತ್ರದಲ್ಲಿ ಬೇರೆ ಬೇರೆ ಇರುತ್ತೆ. ರಾಜು ಕಾಗೆ ಅವರದ್ದು ಬೇರೆ ಬೇರೆ ಸಮಸ್ಯೆ ಇದೆ ಅಂತಾ ಹೇಳ್ತಾರೆ. ಒಂದು ವರ್ಷದಿಂದ ನಮ್ಮ ಬಳಿಯೂ ಸಾಕಷ್ಟು ಹೇಳಿದ್ದಾರೆ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಸಿಎಂ ಎಲ್ಲವನ್ನೂ ಸರಿ ಮಾಡುತ್ತಾರೆ ಎಂದಿದ್ದಾರೆ.