ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್, ಅಲ್ಲಿ ರೌಡಿಗಳ ಸ್ನೇಹ ಬೆಳೆಸಿ ಐಷಾರಾಮಿ ಬದುಕು ಸಾಗಿಸುತ್ತಿದ್ದರು ಎನ್ನುವ ವಿಷಯ ಬಹಿರಂಗವಾಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈಗ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.
ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಸಂಖ್ಯೆ ಹೆಚ್ಚಾಗುತ್ತ ಸಾಗುತ್ತಿವೆ. ಆ ಸಾಕ್ಷ್ಯಗಳ ಪರಿಶೀಲನೆ, ಮರು ಪರಿಶೀಲನೆಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಇನ್ನೂ ಎರಡು ಹೊಸ ಸಾಕ್ಷ್ಯಗಳನ್ನು ಪಟ್ಟಿಗೆ ಸೇರಿಸಲಾಗಿದೆ.
ಸದ್ಯದ ಮಾಹಿತಿಯಂತೆ ದರ್ಶನ್ ವಿರುದ್ಧ 4500 ಪುಟಗಳ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. 100ಕ್ಕೂ ಅಧಿಕ ಸಾಕ್ಷ್ಯಗಳನ್ನು ಈಗಾಗಲೇ ಪೊಲೀಸರು ಸಂಗ್ರಹಿಸಿದ್ದಾರೆ. ಹಲವರ ಹೇಳಿಕೆಗಳನ್ನು ಕೂಡ ದಾಖಲಿಸಿಕೊಳ್ಳಲಾಗಿದೆ. 150ಕ್ಕೂ ಹೆಚ್ಚು ಮಟೀರಿಯಲ್ ಎವಿಡೆನ್ಸ್ ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಡಿಜಿಟಲ್ ಎವಿಡೆನ್ಸ್ಗಳು ಸಹ ದೊಡ್ಡ ಸಂಖ್ಯೆಯಲ್ಲಿವೆ. ಹಲವು ವಸ್ತುಗಳನ್ನು ಬೆಂಗಳೂರು ಹಾಗೂ ಹೈದರಾಬಾದ್ ಎಫ್ ಎಸ್ ಎಲ್ ಕೇಂದ್ರಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಲಾಗಿದೆ. ಆದರೆ, ಇನ್ನೂ ಕೆಲವು ವರದಿಗಳು ಪೊಲೀಸರ ಕೈಗೆ ಸಿಗಬೇಕಿದೆ. ಆ ವರದಿಗಳು ಬಂದ ಕೂಡಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಸಾಕ್ಷ್ಯ ಸಂಗ್ರಹ ಸೇರಿದಂತೆ ತನಿಖೆ ಕೈಗೊಂಡಿರುವ ಪೊಲೀಸರೊಂದಿಗೆ ಡಿಜಿಪಿ ಅಲೋಕ್ ಮೋಹನ್, ಆಯುಕ್ತ ದಯಾನಂದ್ ತನಿಖಾಧಿಕಾರಿಗಳೊಟ್ಟಿಗೆ ಸದಾ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶಗಳು ಸಿಗದಂತೆ ಶಿಸ್ತಿನ ಕಟ್ಟು-ನಿಟ್ಟಿನ ಆರೋಪ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತಿದೆ.
ನಡುವೆ ಎರಡು ಲಾರಿಗಳನ್ನು ಸಹ ಸಾಕ್ಷ್ಯಗಳ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಪಟ್ಟಣಗೆರೆ ಶೆಡ್ನಲ್ಲಿದ್ದ ಎರಡು ಲಾರಿಗಳನ್ನು ಮೆಟಿರಿಯಲ್ ಎವಿಡೆನ್ಸ್ ಎಂದು ಪರಿಗಣಿಸಲಾಗಿದೆ. ಅವುಗಳ ಮಾಲೀಕರ ಮಾಹಿತಿ ಮತ್ತು ಇತರೆ ಮಾಹಿತಿಗಳನ್ನು ಪಡೆಯಲು ಪೊಲೀಸರು ಆರ್ಟಿಓ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ದರ್ಶನ್ ಮತ್ತು ಗ್ಯಾಂಗ್, ರೇಣುಕಾ ಸ್ವಾಮಿಯನ್ನು ಆ ಲಾರಿಗಳಿಗೆ ನೂಕಿ ಹೊಡೆದಿದ್ದರು ಎಂಬ ಆರೋಪವಿದೆ. ಒಟ್ಟಾರೆಯಾಗಿ ದರ್ಶನ್ ಆಂಡ್ ಗ್ಯಾಂಗ್ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳದಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ.