ಕುಂದಾಪುರ: ಕಳೆದೆರಡು ದಿನಗಳ ಹಿಂದೆ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ರೆಡಿಯೋ ಕಾಲರ್ ಹೊಂದಿದ ಒಂಟಿ ಸಲಗವು ಮಂಗಳವಾರ ಉಡುಪಿ- ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
ಕಳೆದ ತಿಂಗಳು ಹಾಸನದಿಂದ ಈ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸಿ ಭದ್ರಾ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಅಲ್ಲಿಂದ ಒಂಟಿಯಾಗಿ ತಪ್ಪಿಸಿಕೊಂಡು ತಿರುಗುತ್ತಿದೆ. ಕಳೆದೆರಡು ದಿನಗಳಿಂದ ತೀರ್ಥಹಳ್ಳಿ ಆರಗ ಮೊದಲಾದೆಡೆ ಆನೆ ಸಂಚಾರ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಇದೀಗ ರಾಜ್ಯ ಹೆದ್ದಾರಿಯಲ್ಲಿ ಆನೆ ಕಂಡು ವಾಹನ ಸವಾರರು ಭಯ ಭೀತರಾಗಿದ್ದಾರೆ.
ಮಂಗಳವಾರ ಸಂಜೆ ವೇಳೆ ಒಂಟಿ ಆನೆ ಮಾಸ್ತಿಕಟ್ಟೆ ಆಸುಪಾಸು ಓಡಾಡಿದ್ದು, ಬಹುತೇಕ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಿಣಾಮ ಹೊಸಂಗಡಿ, ಕೆಪಿಸಿ, ಭಾಗಿಮನೆ ಸೇರಿದಂತೆ ಅಮಾಸೆಬೈಲು, ತೊಂಬಟ್ಟು ಭಾಗದ ನಿವಾಸಿಗಳು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಡ್ರೋನ್ ಕ್ಯಾಮೆರಾದ ಮೂಲಕ ಆನೆಯ ಚಲನವಲನವನ್ನು ಸೆರೆ ಹಿಡಿಯಲಾಗಿದೆ.