ಲಕ್ನೋ: ಉತ್ತರಪ್ರದೇಶದಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಸುಹೇಲ್ದೇವ್ ಸ್ವಾಭಿಮಾನ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜ್ಭರ್ ಅವರಿಗೆ ಮಾಜಿ ಸಹೋದ್ಯೋಗಿಯೊಬ್ಬರು, ಬಹಿರಂಗ ವೇದಿಕೆಯಲ್ಲಿ ಹಾರ ತೊಡಿಸಿ, ಬಳಿಕ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಜೌನ್ ಪುರ ಜಿಲ್ಲೆಯಲ್ಲಿ ಮಹಾರಾಜಾ ಸುಹೇಲ್ದೇವ್ ಅವರ ವಿಜಯ ದಿವಸ ಕಾರ್ಯಕ್ರಮ ಹಾಗೂ ಭೂಮಿ ಪೂಜೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಹೇಲ್ದೇವ್ ಸ್ವಾಭಿಮಾನ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜ್ಭರ್ ಅವರನ್ನು ಆಹ್ವಾನಿಸಲಾಗಿತ್ತು. ಅವರು ವೇದಿಕೆಗೆ ಬರುತ್ತಿದ್ದಂತೆ ಸ್ವಾಗತಿಸಲೆಂದು ಪಕ್ಷದ ನಾಯಕರಾದ ಬೃಜೇಶ್ ರಾಜ್ಭರ್ ಅವರು ಮುಂದೆ ಬಂದರು. ಹಾರಗಳ ಗುಚ್ಛವನ್ನೇ ತಂದಿದ್ದ ಅವರು, ಮಹೇಂದ್ರ ಅವರ ಕೊರಳಿಗೆ ಹಾರಗಳನ್ನು ಹಾಕಿದರು. ಎಲ್ಲರೂ ಚಪ್ಪಾಳೆ ಹೊಡೆಯಲು ಶುರುವಿಡುತ್ತಿದ್ದಂತೆಯೇ, ಮಹೇಂದ್ರ ಅವರ ಕಪಾಳಕ್ಕೆ ಬೃಜೇಶ್ ಬಾರಿಸತೊಡಗಿದರು.
ಘಟನೆಯ ಹಿನ್ನೆಲೆಯಲ್ಲಿ ಮಹೇಂದ್ರ ರಾಜ್ಭರ್ ಅವರು ಬೃಜೇಶ್ ವಿರುದ್ಧ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ನಾನು ಭೂಮಿ ಪೂಜೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದೆ. ಕಾರ್ಯಕ್ರಮದಲ್ಲಿ ನಾನು ಭಾಷಣ ಮಾಡಲೆಂದು ಏಳುತ್ತಿದ್ದಂತೆ ಬೃಜೇಶ್ ಅವರು ಬಂದು ನನಗೆ ಹಾರ ಹಾಕಿ, ಬಳಿಕ ಒಂದೇ ಸಮನೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹೇಂದ್ರ ಆರೋಪಿಸಿದ್ದಾರೆ.
ಅಲ್ಲದೇ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿಯ ನಾಯಕ, ಉತ್ತರ ಪ್ರದೇಶ ಯೋಗಿ ಸರ್ಕಾರದ ಸಚಿವರಾದ ಪ್ರಕಾಶ್ ರಾಜ್ಭರ್ ಅವರ ಸೂಚನೆ ಮೇರೆಗೆ ಬೃಜೇಶ್ ನನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಬೃಜೇಶ್, “ಮಹೇಂದ್ರ ಅವರು ಸಮಾಜವಾದಿ ಪಕ್ಷದಿಂದ ಹಣ ಪಡೆದು, ವಿವಿಧ ಕಾರ್ಯಕ್ರಮಗಳಲ್ಲಿ ನನ್ನ ವಿರುದ್ಧ ಅವಹೇಳನ ಮಾಡುತ್ತಿದ್ದರು” ಎಂದಿದ್ದಾರೆ.