ಕೋಲ್ಕತ್ತಾದ ಇಸ್ಕಾನ್ ಜಗನ್ನಾಥನ ಮಂದಿರ ತನ್ನದೇ ಆದ ಐತಿಹ್ಯ ಹೊಂದಿರುವ ಸುಪ್ರಸಿದ್ದ ದೇಗುಲ. ಇಂತಹ ದೇಗಲಕ್ಕೀಗ ಭಾರತೀಯ ಸೇನೆಯ ಬಲ ಭೀಮ ಸುಖೋಯ್ ನ ನಂಟು ಬರುತ್ತಿರುವುದು ವಿಶೇಷ. ಎದುರಾಳಿಗಳ ಜಂಗಾಬಲವನ್ನೇ ಪುಡಿ ಮಾಡುವ ತಾಕತ್ತಿನ ಸುಖೋಯ್ ಗೂ ಜಗನ್ನಾಥನಿಗೂ ಎಲ್ಲಿಯ ಸಂಬಂಧ ಅನ್ನೋದು ಅಚ್ಚರಿ ಮೂಡಿಸುತ್ತಿದೆ. ಆದರೆ, ಇದು ನಿಜ. ಸುಖೋಯ್ ಯುದ್ಧ ವಿಮಾನದ ಗಾಲಿಗಳನ್ನೇ ಈಗ ಇಸ್ಕಾನ್ ಜಗನ್ನಾಥನ ರಥಗಳಿಗೆ ಅಳವಡಿಸಲಾಗುತ್ತಿದೆ.
ಇಸ್ಕಾನ್ ದೇಗುಲದ ರಥಗಳ ಚಕ್ರಕ್ಕೆ ಬಂತು ಕಡೆಗೂ ಶುಕ್ರದೆಸೆ
1972ರಲ್ಲಿ 3 ದೇವತೆಗಳಿದ್ದ ಸಣ್ಣ ರಥವನ್ನು ವಾಡಿಕೆಯೆಂತೆ ಕಾರ್ಯಾರಂಭಿಸಲಾಗಿತ್ತು. ಆದರೆ ಮುಂದೆ 5 ವರ್ಷಗಳ ಬಳಿಕ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರಿಗಾಗಿಯೇ ಮೂರು ಪ್ರತ್ಯೇಕ ರಥಗಳನ್ನು ನಿರ್ಮಿಸಲಾಯಿತು. ಭಕ್ತರೊಬ್ಬರು ನೀಡಿದ ಕೊಡುಗೆಯ ಫಲವಾಗಿ ಇಸ್ಕಾನ್ ನಲ್ಲಿ ಮೂರು ರಥಗಳನ್ನು ಎಳೆಯುವ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. ಅತ್ಯಂತ ಭಾರವಾಗಿದ್ದ ಈ ರಥಗಳಿಗೆ ಕಬ್ಬಿಣ ಇಲ್ಲವೇ ಕಲ್ಲಿನ ಗಾಲಿಗಳನ್ನು ಬಳಸುವ ಬದಲಿಗೆ ಆರಂಭದಲ್ಲಿ ಬೋಯಿಂಗ್ ವಿಮಾನದ ಚಕ್ರಗಳನ್ನು ಅಳವಡಿಸಲಾಗಿತ್ತು.
ಆದರೆ ಕಾಲಾನುಕ್ರಮದಲ್ಲಿ ಈ ಬೋಯಿಂಗ್ ಚಕ್ರಗಳು ಸವಕಲಾಗುತ್ತಾ ಬಂದವು. 2005ರಲ್ಲಿ ಈ ಚಕ್ರಗಳನ್ನು ಬದಲಿಸಲು ದೇಗುಲ ಆಡಳಿತ ಮಂಡಳಿ ತೀರ್ಮಾನಿಸಿತು. ರಥದ ಬೃಹತ್ ಭಾರ ಹೊರಬಲ್ಲ ಚಕ್ರಗಳಿಗಾಗಿ ನಿರಂತರ ಶೋಧ ಶುರುವಾಯ್ತು. ರಥದ ಭಾರ, ದೇವರ ವಿಗ್ರಹ ಮತ್ತು ಅರ್ಚಕರು, ಭಕ್ತರ ಭಾರ ಸೇರಿ ಆರಂಭದಲ್ಲಿ 9 ಟನ್ ಅಂತಾ ಅಂದಾಜಿಸಲಾಗಿತ್ತು. ಆದರೆ, ಈ ಭಾರದ ಗಣಿತ 16 ಟನ್ ಗೆ ತಲುಪಿತು. ಹೀಗಾಗಿ ಅತ್ಯಂತ ಬಲಿಷ್ಠ ಚಕ್ರಗಳೇ ರಥಕ್ಕೆ ಅನಿವಾರ್ಯವಾಯ್ತು. ಹೀಗಾಗಿ ಯುದ್ಧ ವಿಮಾನಗಳಿಗೆ ಚಕ್ರ ಪೂರೈಸ್ತಿದ್ದ ಡನ್ಲಪ್ ಸಂಸ್ಥೆಯನ್ನು ಸಂಪರ್ಕಿಸಲಾಯ್ತು. ಆದ್ರೆ ಆ ಹೊತ್ತಿಗಾಗಲೇ ಆ ಕಂಪನಿ ತನ್ನ ಉತ್ಪಾದನೆಯನ್ನೇ ನಿಲ್ಲಿಸಿತ್ತು. ದೇಗುಲ ಆಡಳಿತ ಮಂಡಳಿಗೆ ಮತ್ತೆ ಹೊಸ ತಲೆನೋವು ಶುರುವಾಗಿತ್ತು.
ಎಂಆರ್ ಎಫ್ ಮೊರೆ ಹೋದ ದೇಗುಲ ಆಡಳಿತ ಮಂಡಳಿ
2005ರಿಂದ ಆರಂಭವಾದ ಚಕ್ರಾನ್ವೇಷಣೆ ಮುಂದುವರಿದೇ ಇತ್ತು. ದೇಶದ ದೈತ್ಯ ಕಂಪನಿಗಳನ್ನೆಲ್ಲಾ ದೇಗುಲ ಆಡಳಿತ ಮಂಡಳಿ ಸಂಪರ್ಕಿಸಿತ್ತು. ಆದರೆ, ಎಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿರಲಿಲ್ಲ. 2018ರಲ್ಲಿ ರಥಗಳಿಗೆ ಎಂಆರ್ ಎಫ್ ನಿಂದ ಚಕ್ರಗಳನ್ನು ಪಡೆದ್ರೆ ಹೇಗೆ ಅನ್ನೋ ಲೆಕ್ಕ ಶುರುವಾಯಿತು. ಆ ಹೊತ್ತಿಗಾಗಲೇ ಎಂಆರ್ ಎಫ್ ಸುಖೋಯ್ ಯುದ್ಧ ವಿಮಾನಕ್ಕೆ ಚಕ್ರ ಪೂರೈಸುವ ಕಾರ್ಯ ಆರಂಭಿಸಿತ್ತು.
ಆದರೆ, ದೇಗುಲದ ಬೇಡಿಕೆಗೆ ಈ ಸಂಸ್ಥೆ ಯಾವ ಉತ್ತರವನ್ನೂ ನೀಡಲೇ ಇಲ್ಲ, ಆದರೆ ಒಂದು ದಿನ ಎಂಆರ್ಎಫ್ ನಿಂದ ಉತ್ತರ ಬಂದಿತ್ತು. ಈ ಮೂಲಕ ಬರೋಬ್ಬರಿ 6 ವರ್ಷಗಳ ಬಳಿಕ ದೇಗುಲ ಮಂಡಳಿಯ ಕನಸನ್ನು ನನಸಾಗಿಸುವ ಕಾರ್ಯವನ್ನು ಎಂಆರ್ ಎಫ್ ಸ್ವೀಕರಿಸಿತ್ತು. 2024ರಲ್ಲಿ ರಥಕ್ಕೆ ಗಾಲಿ ಒದಗಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಇದರನ್ವಯ ಕಳೆದ ತಿಂಗಳು ನೂತನ ಚಕ್ರಗಳು ಕೋಲ್ಕತ್ತಾ ತಲುಪಿದ್ದು, ಇದೀಗ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಈ ವರ್ಷದ ಜೂನ್ 21ರಂದು ನಡೆಲಿರುವ ಮಹೋತ್ಸವದಲ್ಲಿ ದೇವರ ಹೊತ್ತು ಸಾಗುವ ರಥಗಳು ಸುಖೋಯ್ ಯುದ್ಧ ವಿಮಾನದ ಗಾಲಿಗಳ ಮೇಲೆ ಮುನ್ನುಗ್ಗಲಿವೆ ಅನ್ನೋದು ವಿಶೇಷ.