ಮನಿ ಕೊಟ್ರಷ್ಟೇ ಮನೆ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇನ್ನು ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಮರಳಿರುವ ಸಿಎಂ ಸಿದ್ದರಾಮಯ್ಯ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲೇ ಬಹಿರಂಗ ಆರೋಪ ಮಾಡಿರುವುದಲ್ಲದೇ, ಆಡಿಯೋ ಬಾಂಬ್ ಸಿಡಿಸಿದ್ದ ಶಾಸಕ ಬಿ.ಆರ್. ಪಾಟೀಲ್ ಗೆ ಸಿಎಂ ಬುಲಾವ್ ನೀಡಿದ್ದರು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಭೇಟಿಯಾದ ಆಳಂದ ಶಾಸಕ, ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಅಂತಾ ಸಿಎಂ ಮುಂದೆ ದೂರಿದ್ದಾರೆ.
ನಾನು ನೀಡಿದ್ದ ಶಿಫಾರಸ್ಸುಗಳ ಫಲಾನುಭವಿಗಳಿಗೆ ಮನೆ ನೀಡಲಾಗಿಲ್ಲ. ಬದಲಿಗೆ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಮಾಡಲಾಗಿರುವ ಶಿಫಾರಸ್ಸುಗಳನ್ನು ಪುರಸ್ಕರಿಸಲಾಗಿದೆ. ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸಿಎಂ ಮುಂದೆಯೂ ಪಾಟೀಲ್ ಪುನರುಚ್ಛರಿಸಿದ್ದಾರೆ.
ಇದ್ದಕ್ಕೆ ಉತ್ತರಿಸಿರುವ ಸಿಎಂ, ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಇಲ್ಲಾ ಸಂಬಂಧಪಟ್ಟ ಸಚಿವರೊಟ್ಟಿಗೆ ಚರ್ಚಿಸಬೇಕು. ಇಲ್ಲದಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು ಅಂತಾ ತಾಕೀತು ಮಾಡಿದ್ದಾರೆ. ನಿಮ್ಮ ಆರೋಪಗಳ ಬಗ್ಗೆ ನಾನು ಪರಿಶೀಲನೆ ಮಾಡ್ತೀನಿ, ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಅಂತಲೂ ಸಿದ್ದರಾಮಯ್ಯ, ಬಿ.ಆರ್. ಪಾಟೀಲ್ ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ವಸತಿ ಸಚಿವ ಜಮೀರ್ ಅಹ್ಮದ್ ರನ್ನೂ ಕರೆಸಿಕೊಂಡಿದ್ದ ಸಿಎಂ ಆರೋಪಗಳ ಬಗ್ಗೆ ಸ್ಪಷ್ಟನೆ ಪಡೆದಿದ್ದಾರೆ. ಬಿ.ಆರ್. ಪಾಟೀಲರ ಆರೋಪಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಹಾಗಂತಾ ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಮಾಹಿತಿಯೂ ನನಗಿಲ್ಲ ಎಂದು ಜಮೀರ್, ಸಿಎಂಗೆ ಸ್ಪಷ್ಟನೆ ನೀಡಿದ್ದಾರೆ. ಮನೆಗಾಗಿ ಮನಿ ಪ್ರಕರಣದಲ್ಲೀಗ ಸಿಎಂ ಎಂಟ್ರಿಯಾಗಿದ್ದು ಮುಂದೆ ಯಾವ ತಿರುವು ಪಡೆಯುತ್ತೆ, ಬಿಆರ್ ಪಾಟೀಲ್ ಸುಮ್ಮನಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.