ಬೆಂಗಳೂರು: ಐತಿಹಾಸಿಕ ಹಾಗೂ ಸಾಂಸ್ಕೃತಿಯ ಹಿನ್ನೆಲೆಯುಳ್ಳ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಬೆಂಗಳೂರು ಕರಗ (Bengaluru Karaga) ಮಹೋತ್ಸವ ಶಾಸ್ತ್ರೋಕ್ತವಾಗಿ ನಡೆಯಿತು.
ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಜರುಗಿತು. ಪ್ರತಿಯೊಬ್ಬರೂ ಗೋವಿಂದ.. ಗೋವಿಂದ… ಎಂದು ಘೋಷವಾಕ್ಯ ಮೊಳಗಿಸಿದರು. ಮಧ್ಯರಾತ್ರಿ ಕರಗ ಮೆರವಣಿಗೆ ಸಾಗಿತು. ಲಕ್ಷಾಂತರ ಭಕ್ತರು ಮಧ್ಯರಾತ್ರಿಯೂ ನಿಂತು ಕರಗದ (Karaga Procession) ದರ್ಶನ ಪಡೆದು ಪುನೀತರಾದರು.
ಅರ್ಚಕ ಎ.ಜ್ಞಾನೇಂದ್ರ ಈ ಬಾರಿಯೂ ಕರಗ ಹೊತ್ತು ಸಾಗಿದರು. ವೀರಕುಮಾರರು ಕರಗದೊಂದಿಗೆ ಸಾಗಿದರು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆದಿದ್ದವು. ಕಬ್ಬನ್ ಪಾರ್ಕ್ ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗಿತ್ತು.
ತೇರನ್ನು ಸಿಂಗಾರಗೊಳಿಸಲಾಗಿದೆ. ಸರ್ವ ಧರ್ಮಗಳ ಸಂಕೇತವಾದ ಕರಗ ಬೆಂಗಳೂರಿನ ಕಾಟನ್ಪೇಟೆಯ ಹಜರತ್ ತವಾಕಲ್ ಮಸ್ತಾನ್ ದರ್ಗಾದಲ್ಲೂ ಪ್ರದಕ್ಷಿಣೆ ಹಾಕಿತು. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಬಂದ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡ ಪೇಟೆಯಿಂದ ಕೆ.ಆರ್.ಮಾರುಕಟ್ಟೆ ತಲುಪಿ, ತವಕ್ಕಲ್ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಭಾನುವಾರ ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ದೇವಸ್ಥಾನಕ್ಕೆ ಮರಳಿ ಬಂದಿತು. ಈ ದಾರಿ ಮಧ್ಯೆ ಲಕ್ಷಾಂತರ ಭಕ್ತರು ಕರಗದ ದರ್ಶನ ಪಡೆದರು.