ಬೆಂಗಳೂರು: ಉಡುಪಿಯ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಕ್ತಿ ಸಮಾವೇಶ ಮತ್ತು ಬೈಂದೂರು ತಾಲೂಕು ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಲಿತ ಸಂಘರ್ಷ ಸಮಿತಿ ಕಳೆದ ಹಲವರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯಗಳಿಗೆ ಹೋರಾಟ, ಪ್ರತಿಭಟನೆಯ ಮೂಲಕ ನ್ಯಾಯ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಾಖೆಗಳ ಮೂಲಕ ಸಂಘಟನೆಗೆ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಬೈಂದೂರಿನಲ್ಲಿ ಭೀಮಶಕ್ತಿ ಸಮಾವೇಶ ಬಹಳ ಅದ್ದೂರಿಯಾಗಿ ನಡೆದಿದೆ ಎಂದರು. ಅಲ್ಲದೇ ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
ನೂತನ ಅಧ್ಯಕ್ಷ ಶಿವರಾಜ್ ಬೈಂದೂರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸಂಘಟನೆ ಮಾಡಲಿದೆ ಎಂದಿದ್ದಾರೆ. ಈ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು.
ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೆ.ಎಲ್. ಅಶೋಕ್, ಭಾಸ್ಕರ್ ಮಾಸ್ಟರ್, ರಾಘವೇಂದ್ರ, ಸುರೇಶ್ ಹಕ್ಲಾಡಿ, ರಾಜು ಕೆ.ಸಿ. ಬೆಟ್ಟಿನಮನೆ, ಗೀತಾ ಸುರೇಶ್ ಕುಮಾರ್, ಶಿವರಾಜ್ ಬೈಂದೂರು, ವಿನೋದ ಮಾಸ್ತಿಕಟ್ಟೆ, ಸುರೇಶ್ ಬೈಂದೂರು, ರವಿ ಬನ್ನಾಡಿ, ಚೈತ್ರ ಬೈಂದೂರು, ಮಂಜುನಾಥ ನಾಗೂರು ಸೇರಿದಂತೆ ಹಲವರು ಇದ್ದರು.