ರಾಜ್ಯ ಕಾಂಗ್ರೆಸ್ ನಲ್ಲಿ ಹೊತ್ತಿರುವ ಅಸಮಾಧಾನದ ಬೆಂಕಿಯನ್ನು ನಂದಿಸುವ ಕಾರ್ಯಕ್ಕಿಂದು ಚಾಲನೆ ನೀಡಲಾಗುತ್ತಿದೆ. ಸ್ವಪಕ್ಷದ ವಿರುದ್ಧವೇ ಭಷ್ಟಾಚಾರದ ಬಾಂಬ್ ಸಿಡಿಸಿ, ರಾಜೀನಾಮೆ ಮಾತುಗಳನ್ನಾಡಿರುವ ಶಾಸಕರ ಮನವೊಲಿಕೆ ಕಾರ್ಯಕ್ಕಿಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚಾಲನೆ ನೀಡಲಿದ್ದಾರೆ.
ಕೆಲಹೊತ್ತಿನಲ್ಲೇ ಬೆಂಗಳೂರಿಗೆ ಆಗಮಿಸಲಿರುವ ಸುರ್ಜೇವಾಲಾ ಮೊದಲ ಹಂತದಲ್ಲಿ 42 ಶಾಸಕರೊಟ್ಟಿಗೆ ಓನ್ ಟು ಓನ್ ಚರ್ಚೆ ನಡೆಸಿ, ಅಹವಾಲು ಸ್ವೀಕರಿಸಲಿದ್ದಾರೆ. ಇಂದಿನಿಂದ ಜುಲೈ 2ರವರೆಗೆ ಮೂರು ದಿನಗಳ ಕಾಲ ಪಕ್ಷದ ಅತೃಪ್ತರೊಟ್ಟಿಗೆ ಸುರ್ಜೇವಾಲಾ ಸಮಾಲೋಚನೆ ನಡೆಸಲಿದ್ದಾರೆ. ಇದರ ಮೊದಲ ಚರಣ ಎನ್ನುವಂತೆ ಇಂದು ಬಂಡಾಯದ ಬಾಂಬ್ ಸಿಡಿಸಿದ್ದ ಆಳಂದ ಶಾಸಕ ಬಿ ಆರ್ ಪಾಟೀಲ್ ಹಾಗೂ ಕಾಡವಾಡದ ಶಾಸಕ ರಾಜು ಕಾಗೆಯವರೊಟ್ಟಿಗೆ ಸುರ್ಜೇವಾಲಾ ಚರ್ಚಿಸಲಿದ್ದಾರೆ.
ವಸತಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗಣದರ ಬಗ್ಗೆ ಬಿ.ಆರ್. ಪಾಟೀಲ್ ಬಹಿರಂಗ ಆರೋಪ ಮಾಡಿದ್ದರು. ಇತ್ತ ರಾಜು ಕಾಗೆ ಕೂಡ ಅನುದಾನವೇ ಬರುತ್ತಿಲ್ಲ. ರಾಜೀನಾಮೆ ನೀಡುವ ಕಾಲ ಬಂದರೂ ಆಶ್ಚರ್ಯವಿಲ್ಲ ಎಂದಿದ್ದರು. ಈ ಇಬ್ಬರೊಟ್ಟಿಂದು ತಲಾ ಅರ್ಥಗಂಟೆ ಸುರ್ಜೇವಾಲ ಚರ್ಚಿಸಿ ಅಸಮಾಧಾನಕ್ಕೆ ಮದ್ದು ಅರಿಯಲಿದ್ದಾರೆ.