ಬೆಳಗಾವಿ: 10 ವರ್ಷಗಳ ಬಳಿಕ ಗೋಕಾಕ್ ಮಹಾಲಕ್ಷ್ಮಿ ಜಾತ್ರೆ ನಡೆಯುತ್ತಿದ್ದು, ಈಗ ಬ್ಯಾನರ್ ಪಾಲಿಟಿಕ್ಸ್ ನಡೆಯುತ್ತಿದೆ.
ಜಾರಕಿಹೊಳಿ ಕುಟುಂಬ ಸದಸ್ಯರು, ಆಪ್ತರಿಗೆ ಮಾತ್ರ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಸಭೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹಲವರು ಆರೋಪಿಸಿದ್ದಾರೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ್ ನಗರದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿ, ಸದಾಶಿವ ಗುದಗಗೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೂ ಸ್ವಾಗತ ಕೋರುವ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸಭೆಯಲ್ಲಿ ಈ ವಿಷಯ ಪ್ರಸ್ತಾವನೆ ಆಗುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಗತ ಕೋರುವ ಬ್ಯಾನರ್ ಅಳವಡಿಕೆಗೆ ಅವಕಾಶ ನಿರಾಕರಣೆ ವಿಷಯ ನನಗೆ ಗೊತ್ತಿಲ್ಲ. ಲಕ್ಷ್ಮಿ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಈ ಹಿನ್ನೆಲೆಯ್ಲಲಿ ಬ್ಯಾನರ್ ಅಳವಡಿಕೆ ಕುರಿತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಜಾತ್ರೆಯೇ ಬೇರೆ, ರಾಜಕಾರವೇ ಬೇರೆ. ಎಲ್ಲರಿಗೂ ಬ್ಯಾನರ್ ಅಳವಡಿಕೆಗೆ ಅವಕಾಶ ಕೊಡಿ ಎಂದು ಗೋಕಾಕ್ ನಗರಸಭೆ ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ.