ಚೆನ್ನೈ: ಕೇಂದ್ರ ಸರ್ಕಾರದ ಭಾಷಾ ನೀತಿಯನ್ನು ಟೀಕಿಸುವ ಸಂದರ್ಭದಲ್ಲಿ ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಕರ್ನಾಟಕವನ್ನು ಉದಾಹರಣೆಯಾಗಿ ನೀಡಿದ ಘಟನೆ ನಡೆದಿದೆ. ಕರ್ನಾಟಕದಲ್ಲಿ “ಭಾಷಾ ಹೇರಿಕೆ”ಯಿಂದಾಗಿ ಬರೋಬ್ಬರಿ 90,000 ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಶಾಲಾ ಸ್ಪರ್ಧೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ವೇದಿಕೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಭಾಷಾ ನೀತಿ ಮತ್ತು ರಾಜ್ಯಗಳಿಗೆ ಶೈಕ್ಷಣಿಕ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು, ಬದಲಿಗೆ ಅದು ಅವರ ವೈಯಕ್ತಿಕ ಆಯ್ಕೆಯಾಗಿರಬೇಕು. “ಮೂರನೇ ಭಾಷೆ ಕಡ್ಡಾಯವಲ್ಲ, ಅದು ಆಯ್ಕೆ ಅಷ್ಟೇ,” ಎಂದು ಅವರು ಸ್ಪಷ್ಟವಾಗಿ ಹೇಳಿದ್ದು, ಶೈಕ್ಷಣಿಕ ನೀತಿಗಳಲ್ಲಿ ಹೆಚ್ಚಿನ ಹೊಂದಾಣಿಕೆಯ ಅಗತ್ಯವಿದೆ ಎಂದಿದ್ದಾರೆ. ಪ್ರಸ್ತುತ ಭಾಷಾ ನೀತಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ ಎಂದು ಹೇಳುತ್ತಾ, ಕರ್ನಾಟಕದಲ್ಲಿ ಬೋರ್ಡ್ ಪರೀಕ್ಷೆಗಳಲ್ಲಿ 90 ಸಾವಿರ ವಿದ್ಯಾರ್ಥಿಗಳು ಫೇಲ್ ಆಗಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಅವರು, ಉತ್ತಮ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುತ್ತಿರುವ ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಿಗೆ ಅಗತ್ಯ ಶಿಕ್ಷಣ ನಿಧಿಗಳನ್ನು ಕೇಂದ್ರವು ತಡೆಹಿಡಿಯುತ್ತಿದೆ ಎಂದು ಆರೋಪಿಸಿದರು. “ಶಿಕ್ಷಣ ನಿಧಿಗಳನ್ನು ತಡೆಹಿಡಿಯುವ ಮೂಲಕ ಕೇಂದ್ರವು ರಾಜ್ಯಗಳನ್ನು ಬೆದರಿಸುತ್ತಿದೆ. ಆದರೆ ನಮ್ಮ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದೃಢವಾಗಿ ನಿಂತಿದ್ದು, ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ,” ಎಂದು ಅನ್ಬಿಲ್ ಮಹೇಶ್ ತಿಳಿಸಿದರು.
ಇತ್ತೀಚೆಗಷ್ಟೇ, ಡಿಎಂಕೆ ಸಂಸದೆ ಕನಿಮೋಳಿ ಅವರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಯಾವುದೇ ಭಾಷೆಯ ಶತ್ರುವಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. “ಹಿಂದಿ ಯಾವುದೇ ಭಾಷೆಯ ಶತ್ರು ಅಲ್ಲ ಎಂದರೆ, ತಮಿಳು ಕೂಡ ಯಾವುದೇ ಭಾಷೆಯ ಶತ್ರು ಅಲ್ಲ. ಅವರು ತಮಿಳು ಕಲಿಯಲಿ. ಉತ್ತರ ಭಾರತದ ಜನರು ಕನಿಷ್ಠ ಒಂದು ದಕ್ಷಿಣ ಭಾರತದ ಭಾಷೆಯನ್ನು ಕಲಿಯಲಿ. ಅದು ನಿಜವಾದ ರಾಷ್ಟ್ರೀಯ ಏಕೀಕರಣ,” ಎಂದು ಕನಿಮೋಳಿ ಹೇಳಿದ್ದರು.