ಭುವನೇಶ್ವರ: ಒಡಿಶಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ಮೂರ್ತಿಗಳನ್ನು ಹೊತ್ತ ರಥವು ಶ್ರೀ ಗುಂಡಿಚಾ ದೇಗುಲದ ಸಮೀಪಕ್ಕೆ ತಲುಪಲು ಕೆಲವೇ ನಿಮಿಷಗಳು ಬಾಕಿಯಿರುವಂತೆಯೇ ಈ ಘಟನೆ ನಡೆದಿದೆ. ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲವು ಸುಮಾರು 3 ಕಿ.ಮೀ. ದೂರದಲ್ಲಿದೆ. ಶುಕ್ರವಾರ ಶ್ರೀ ಜಗನ್ನಾಥ ರಥಯಾತ್ರೆ ಆರಂಭವಾಗಿತ್ತು.
ದೇವರ ದರ್ಶನಕ್ಕಾಗಿ 10 ಲಕ್ಷಕ್ಕೂ ಅಧಿಕ ಮಂದಿ ನೆರೆದಿದ್ದರು. ಜನದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಕೆಲವರು ಕೆಳಕ್ಕೆ ಬಿದ್ದಿದ್ದು, ಅವರ ಮೇಲೆ ಇನ್ನಷ್ಟು ಮಂದಿ ಬಿದ್ದ ಕಾರಣ ಕಾಲ್ತುಳಿತ ಉಂಟಾಯಿತು. ಇದರಿಂದಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರನ್ನು ಪ್ರಭತಿ ದಾಸ್, ಬಸಂತಿ ಸಾಹು ಮತ್ತು 70 ವರ್ಷದ ಪ್ರೇಮಕಾಂತ್ ಮೊಹಾಂತಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದಾರೆ.
ಜನದಟ್ಟಣೆ ನಿಯಂತ್ರಿಸಲು ಸಾಕಷ್ಟು ಪೊಲೀಸರು ಸ್ಥಳದಲ್ಲಿ ಇರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ 10 ಮಂದಿ ಗಾಯಗೊಂಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಆದರೆ, ದಟ್ಟಣೆ ವಿಪರೀತವಾಗಿ ಹೆಚ್ಚಳವಾದ್ದರಿಂದ ನಿಯಂತ್ರಣ ತಪ್ಪಿತು ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.
ಇದೇ ವೇಳೆ, ಈ ಬಾರಿ ರಥಯಾತ್ರೆ ವಿಳಂಬವಾಗಿ ಆರಂಭಿಸಿದ್ದೇ ದುರಂತಕ್ಕೆ ಕಾರಣ ಎಂದು ಬಿಜೆಡಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆರೋಪಿಸಿದ್ದಾರೆ. ಈಗ ನಾವೆಲ್ಲರೂ ಪ್ರಾರ್ಥನೆ ಮಾಡಬೇಕಷ್ಟೇ. ಈ ವರ್ಷ ಇಂಥ ದೈವಿಕ ಉತ್ಸವಕ್ಕೆ ಕಪ್ಪು ಚುಕ್ಕೆಯಿಟ್ಟಂತಹ ಎಲ್ಲರನ್ನೂ ಮಹಾಪ್ರಭು ಜಗನ್ನಾಥ ಕ್ಷಮಿಸಲಿ ಎಂದು ಅವರು ಹೇಳಿದ್ದಾರೆ. ಪಟ್ನಾಯಕ್ ಹೇಳಿಕೆಗೆ ಕಿಡಿಕಾರಿರುವ ಒಡಿಶಾ ಕಾನೂನು ಸಚಿವ, ಬಿಜೆಪಿ ನಾಯಕ ಪೃಥ್ವಿರಾಜ್ ಹರಿಚಂದನ್, ಈ ಹಿಂದೆ ಬಿಜೆಡಿ ಸರ್ಕಾರವೂ ಹಲವು ತಪ್ಪುಗಳನ್ನು ಮಾಡಿ, ಜಗನ್ನಾಥನನ್ನು ಅವಮಾನಿಸಿದೆ. ರಾಜಕೀಯ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಿ ಎಂದಿದ್ದಾರೆ.