ಬೆಂಗಳೂರು: ಉಡುಪಿ ಶ್ರೀಕೃಷ್ಣ ಮಠದಲ್ಲಿ 48 ದಿನಗಳ ಮಂಡಲ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ.
ಆಗಸ್ಟ್ ನಲ್ಲಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಆಗಸ್ಟ್ 1 ರಿಂದ 48 ದಿನಗಳ ಕಾಲ ಮಂಡಲ ಉತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪುತ್ತಿಗೆ ಮಠದಿಂದ ಸಿಎಂಗೆ ಆಹ್ವಾನ ನೀಡಲಾಗಿದೆ. ಮುಖ್ಯಪ್ರಾಣರ ಪ್ರಸಾದ ನೀಡಿ ಮಠದ ಸಿಬ್ಬಂದಿ ಆಹ್ವಾನಿಸಿದ್ದಾರೆ. ಬೆಂಗಳೂರು ಶಾಖಾ ಮಠದ ಎ.ಬಿ. ಕುಂಜಾರ್, ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ ಈ ಸಂದರ್ಭದಲ್ಲಿದ್ದರು.
ಆದರೆ, ಕಳೆದ ಎರಡು ದಶಕಗಳಿಂದಲೂ ಉಡುಪಿ ಮಠದಿಂದ ದೂರ ಇರುವ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಹೋಗುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಕನಕನ ಕಿಂಡಿಯ ಮೇಲಿನ ಗೋಪುರ ಕೆಡವಿದಾಗ ಸಿದ್ದರಾಮಯ್ಯ ವಿರೋಧಿಸಿದ್ದರು. ಕೃಷ್ಣಮಠ ಸರ್ಕಾರದ ವ್ಯಾಪ್ತಿಗೆ ಬರಬೇಕು ಎಂದು ಸಿದ್ದರಾಮಯ್ಯ ಕೂಡ ಪ್ರತಿಪಾದಿಸಿದ್ದರು. ಅಲ್ಲದೇ, ಚಿಕ್ಕಂದಿನಲ್ಲಿ ತಂದೆಯೊಂದಿಗೆ ಮಠಕ್ಕೆ ಹೋಗಿದ್ದಾಗ ಕೈಯಿಂದ ಪ್ರಸಾದ ನೀಡಿ ಅವಮಾನಿಸಿದ್ದು ಕೂಡ ಸಿಎಂ ಮನಸ್ಸಿಗೆ ಘಾಸಿ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಮಠದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಈಗ ಮಠದಿಂದಲೇ ಆಹ್ವಾನ ಬಂದಿದ್ದು, ಭಾಗವಹಿಸುತ್ತಾರಾ? ನೋಡಬೇಕಿದೆ.