ಕೋಲ್ಕತ್ತಾ: ಪದ್ಮಶ್ರೀ ಪುರಸ್ಕೃತ, ಸ್ವಾಮೀಜಿ ಪ್ರದೀಪ್ತಾನಂದ ಅವರ ಮೇಲೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ಮಹಿಳೆಯೊಬ್ಬರು ಕೇಸು ದಾಖಲಿಸಿದ್ದಾರೆ. ಕಾರ್ತಿಕ್ ಮಹಾರಾಜ್ ಎಂದೇ ಕರೆಯಲ್ಪಡುವ ಈ ಸ್ವಾಮೀಜಿಯು ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಗಂಭೀರ ಆರೋಪಗಳನ್ನು ಮಾಡಿದ್ದಾಳೆ.
ಈ ಮಹಿಳೆ 2013ರಿಂದ ತಾನು ಚಾಣಕ್ ಆದಿವಾಸಿ ಅಬಾಸಿಕ್ ಬಾಲಿಕಾ ವಿದ್ಯಾಲಯದಲ್ಲಿ ಉದ್ಯೋಗದ ಭರವಸೆಯ ಮೇರೆಗೆ ಕಾರ್ತಿಕ್ ಮಹಾರಾಜ್ರಿಂದ ಬಹು ಬಾರಿ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದಿದ್ದಾರೆ. ಈ ಶಾಲೆಯನ್ನು ಭಾರತ್ ಸೇವಾಶ್ರಮ ಸಂಘ ನಿರ್ವಹಿಸುತ್ತದೆ, ಇದರ ಕಾರ್ಯದರ್ಶಿಯಾಗಿ ಕಾರ್ತಿಕ್ ಮಹಾರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಿಳೆಯ ದೂರಿನ ಪ್ರಕಾರ, 2012ರ ಡಿಸೆಂಬರ್ನಲ್ಲಿ ಕಾರ್ತಿಕ್ ಮಹಾರಾಜ್ರನ್ನು ಭೇಟಿಯಾದಾಗ, ಅವರು ಚಾಣಕ್ ಆದಿವಾಸಿ ಅಬಾಸಿಕ್ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕೆಲಸ ನೀಡುವ ಭರವಸೆ ನೀಡಿದ್ದರು. 2013ರ ಜನವರಿಯಿಂದ ಆರಂಭವಾಗಿ, ಈ ಶಾಲೆಯ ಹಾಸ್ಟೆಲ್ನ ನಾಲ್ಕನೇ ಮಹಡಿಯಲ್ಲಿ ಖಾಲಿಯಾಗಿದ್ದ ಕೊಠಡಿಯೊಂದರಲ್ಲಿ ನನಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಕಾರ್ತಿಕ್ ಮಹಾರಾಜ್ ತನ್ನನ್ನು ಬಹು ಬಾರಿ ಲೈಂಗಿಕವಾಗಿ ದೌರ್ಜನ್ಯಗೊಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. 2013ರ ಜೂನ್ನಲ್ಲಿ ತಾನು ಗರ್ಭಿಣಿಯಾದಾಗ, ಕಾರ್ತಿಕ್ ಮಹಾರಾಜ್ ತನ್ನನ್ನು ಬೆರ್ಹಾಂಪುರ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ.
ಜೂನ್ 12 ರಂದು ಮಹಿಳೆ ಕಾರ್ತಿಕ್ ಮಹಾರಾಜ್ರನ್ನು ಸಂಪರ್ಕಿಸಿದ್ದಾಗ, ಅವರು ಜೂನ್ 13 ರಂದು ಸಂಜೆ 7 ಗಂಟೆಗೆ ಬೆರ್ಹಾಂಪುರ್ನ ಒಂದು ನಿರ್ದಿಷ್ಟ ಸ್ಥಳದಲ್ಲಿ ಕಾಯುವಂತೆ ಸೂಚಿಸಿದ್ದರು. ಆಗ ಇಬ್ಬರು ವ್ಯಕ್ತಿಗಳು ನನ್ನನ್ನು ಅವರ ವಾಹನದಲ್ಲಿ ಕರೆದೊಯ್ದು, ಜೀವ ಬೆದರಿಕೆ ಹಾಕಿದ್ದಾರೆ. ಮತ್ತೆ ಕಾರ್ತಿಕ್ ಮಹಾರಾಜ್ರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಆರೋಪಗಳನ್ನು ಆಧರಿಸಿ, ಮುರ್ಶಿದಾಬಾದ್ನ ನಬಗ್ರಾಮ್ ಪೊಲೀಸ್ ಠಾಣೆಯಲ್ಲಿ ಜೂನ್ 26ರಂದು ಕಾರ್ತಿಕ್ ಮಹಾರಾಜ್ ವಿರುದ್ಧ ಅತ್ಯಾಚಾರದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಆದರೆ, ಕಾರ್ತಿಕ್ ಮಹಾರಾಜ್ ಈ ಆರೋಪಗಳನ್ನು ತಳ್ಳಿಹಾಕಿದ್ದು, “ಇದು ನನ್ನ ಹೆಸರು ಮತ್ತು ಕೀರ್ತಿಯನ್ನು ಕೆಡಿಸಲು ರೂಪಿಸಲಾದ ಒಂದು ಷಡ್ಯಂತ್ರ” ಎಂದು ಹೇಳಿದ್ದಾರೆ. ಈ ಆರೋಪಗಳು ನಿರಾಧಾರ ಎಂದೂ ವಾದಿಸಿದ್ದಾರೆ.
ರಾಜಕೀಯ ವಿವಾದ
ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಈ ಆರೋಪವನ್ನು ಬಿಜೆಪಿಯೊಂದಿಗಿನ ರಾಜಕೀಯ ಸಂಬಂಧಕ್ಕೆ ಜೋಡಿಸಿದೆ. “ಕಾರ್ತಿಕ್ ಮಹಾರಾಜ್ ಬಿಜೆಪಿ ನಾಯಕರ ಆಪ್ತ ಸಹವರ್ತಿ. ನರೇಂದ್ರೋ ಮೋದಿ ಸರ್ಕಾರದ ವಿಶೇಷ ಶಿಫಾರಸಿನ ಮೇರೆಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು. ಈಗ ಅವರು ಮುರ್ಶಿದಾಬಾದ್ನ ಶಾಲಾ ಕಟ್ಟಡದೊಳಗೆ ಮಹಿಳೆಯ ಮೇಲೆ ಬಹು ಬಾರಿ ಅತ್ಯಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದ್ದಾರೆ” ಎಂದು ಟೀಕಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಕಾರ್ತಿಕ್ ಮಹಾರಾಜ್ರ ಬೆಂಬಲಿಗರು, “ಈ ಆರೋಪಗಳನ್ನು ನಾವು ಖಂಡಿಸುತ್ತೇವೆ, ಮತ್ತು ಅಗತ್ಯವಿದ್ದರೆ, ಪೊಲೀಸರು ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಿದರೆ ಚಳವಳಿಯನ್ನು ಆರಂಭಿಸುತ್ತೇವೆ” ಎಂದು ಹೇಳಿದ್ದಾರೆ. ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವರು ಕಾರ್ತಿಕ್ ಮಹಾರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರೆ, ಇನ್ನು ಕೆಲವರು ಇದನ್ನು ರಾಜಕೀಯ ಷಡ್ಯಂತ್ರ ಎಂದು ಕರೆದಿದ್ದಾರೆ.