ಲೂಧಿಯಾನ: ಪಂಜಾಬ್ನಲ್ಲಿ ನಡೆಯುತ್ತಿರುವ ಗ್ಯಾಂಗ್ಗಳ ನಡುವಿನ ವೈಷಮ್ಯ ಮತ್ತೊಂದು ಭೀಕರ ತಿರುವು ಪಡೆದುಕೊಂಡಿದೆ. ಕುಖ್ಯಾತ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯಾ ಅವರ ತಾಯಿ ಮತ್ತು ಮತ್ತೊಬ್ಬ ಸಂಬಂಧಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಈ ಕೃತ್ಯದ ಹೊಣೆಯನ್ನು ಪ್ರತಿಸ್ಪರ್ಧಿ ದವಿಂದರ್ ಬಂಬಿಹಾ ಗ್ಯಾಂಗ್ ಹೊತ್ತುಕೊಂಡಿದೆ. ಗಮನಾರ್ಹ ಅಂಶವೆಂದರೆ, ಜಗ್ಗು ಮತ್ತು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಡುವೆಯೂ ವೈಷಮ್ಯವಿತ್ತು.
ಗುರುವಾರ ತಡರಾತ್ರಿ ಪಂಜಾಬ್ನ ಬಟಾಲಾದ ಕಾದಿಯಾನ್ ರಸ್ತೆಯಲ್ಲಿರುವ ಬೇಕರಿಯೊಂದರ ಬಳಿ ಈ ಭೀಕರ ಘಟನೆ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಮೋಟರ್ಸೈಕಲ್ನಲ್ಲಿ ಬಂದು ಸ್ಕಾರ್ಪಿಯೋ ಕಾರಿನ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ. ಈ ಕಾರಿನಲ್ಲಿ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯಾ ಅವರ ತಾಯಿ, ಮಾಜಿ ಗ್ರಾಮ ಸರಪಂಚ್ ಹರ್ಜಿತ್ ಕೌರ್ ಮತ್ತು ಅವರ ಸಂಬಂಧಿ ಕರಣ್ವೀರ್ ಸಿಂಗ್ ಇದ್ದರು.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕರಣ್ವೀರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಹರ್ಜಿತ್ ಕೌರ್ ಅವರನ್ನು ತಕ್ಷಣ ಬಟಾಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಅಮೃತಸರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ದಾಳಿಯು ಎರಡು ಗ್ಯಾಂಗ್ಗಳ ನಡುವಿನ ದೀರ್ಘಕಾಲದ ದ್ವೇಷದಿಂದಲೇ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ದಾಳಿಯ ಹೊಣೆ ಹೊತ್ತ ಬಂಬಿಹಾ ಗ್ಯಾಂಗ್
ಈ ದಾಳಿಯ ಹೊಣೆಯನ್ನು ದವಿಂದರ್ ಬಂಬಿಹಾ ಗ್ಯಾಂಗ್ ಹೊತ್ತುಕೊಂಡಿದೆ. ಬಂಬಿಹಾ ಗ್ಯಾಂಗ್ ಮತ್ತು ಜಗ್ಗು ಭಗವಾನ್ಪುರಿಯಾ ಗ್ಯಾಂಗ್ಗಳ ನಡುವೆ ಹಲವು ವರ್ಷಗಳಿಂದ ತೀವ್ರ ಪೈಪೋಟಿ ಮತ್ತು ಹಿಂಸಾಚಾರ ನಡೆಯುತ್ತಿದೆ. ಜಗದೀಪ್ ಸಿಂಗ್ ಅಲಿಯಾಸ್ ಜಗ್ಗು ಭಗವಾನ್ಪುರಿಯಾ ಪಂಜಾಬ್ನ ಗುರುದಾಸ್ಪುರ ಮೂಲದ ಕುಖ್ಯಾತ ಗ್ಯಾಂಗ್ಸ್ಟರ್ ಆಗಿದ್ದಾನೆ. ಅವನ ವಿರುದ್ಧ ಕೊಲೆ, ಸುಲಿಗೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. “ಪಂಜಾಬ್ನ ಸುಲಿಗೆ ರಾಜ” ಎಂದೇ ಕುಖ್ಯಾತಿ ಗಳಿಸಿರುವ ಜಗ್ಗು, ತನ್ನ ಅಪರಾಧ ಜಾಲವನ್ನು ಪಾಕಿಸ್ತಾನದಿಂದ ಕೆನಡಾದವರೆಗೂ ವಿಸ್ತರಿಸಿದ್ದಾನೆ ಎನ್ನಲಾಗಿದೆ. ಕೆನಡಾದಲ್ಲೂ ಹಲವು ಕೊಲೆ ಪ್ರಕರಣಗಳಲ್ಲಿ ಅವನು ಬೇಕಾಗಿದ್ದು, ಗಡಿ ದಾಟಿ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ.
ಒಂದು ಕಾಲದಲ್ಲಿ ಭರವಸೆಯ ಕಬಡ್ಡಿ ಆಟಗಾರನಾಗಿದ್ದ ಜಗ್ಗು, 2015ರಿಂದಲೂ ಜೈಲಿನಲ್ಲಿದ್ದಾನೆ. ಪ್ರಸ್ತುತ, ಮಾರ್ಚ್ 2025ರಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಅವನನ್ನು ಭಟಿಂಡಾದ ಉನ್ನತ ಭದ್ರತಾ ಜೈಲಿನಿಂದ ಅಸ್ಸಾಂನ ಸಿಲ್ಚಾರ್ನ ಹೈ ಸೆಕ್ಯುರಿಟಿ ಜೈಲಿಗೆ ವರ್ಗಾಯಿಸಿದೆ. ಪ್ರತಿಸ್ಪರ್ಧಿ ಗ್ಯಾಂಗ್ ನಾಯಕ ಲಾರೆನ್ಸ್ ಬಿಷ್ಣೋಯ್ನಿಂದ ಜೀವ ಬೆದರಿಕೆ ಇದೆ ಎಂದು ಎನ್ಸಿಬಿ ಈ ಕ್ರಮ ಕೈಗೊಂಡಿತ್ತು.
ಮೂಸೆವಾಲಾ ಕೊಲೆ ಪ್ರಕರಣದ ಲಿಂಕ್ ಮತ್ತು ಗ್ಯಾಂಗ್ ವೈಷಮ್ಯ
ಜಗ್ಗು ಭಗವಾನ್ಪುರಿಯಾ 2022ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಒಂದು ಕಾಲದಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಜೊತೆಗೂಡಿ ಕೆಲಸ ಮಾಡುತ್ತಿದ್ದ ಜಗ್ಗು, ಸಿಧು ಮೂಸೆವಾಲಾ ಹತ್ಯೆಯ ಶೂಟರ್ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂದು ಬಿಷ್ಣೋಯ್ ಮತ್ತು ಬ್ರಾರ್ ಆರೋಪಿಸಿದ ನಂತರ ಅವರ ಸಂಬಂಧ ಹಳಸಿತ್ತು. ಇದರಿಂದ ಶೂಟರ್ಗಳು ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದರು. ಈ ಘಟನೆಯು ಜಗ್ಗು ಮತ್ತು ಬಿಷ್ಣೋಯ್ ಗ್ಯಾಂಗ್ಗಳ ನಡುವಿನ ದ್ವೇಷವನ್ನು ಮತ್ತಷ್ಟು ತೀವ್ರಗೊಳಿಸಿತ್ತು.
ನಂತರ ಗ್ಯಾಂಗ್ಗಳ ನಡುವಿನ ವೈಷಮ್ಯವು ವೈಯಕ್ತಿಕ ಸೇಡಾಗಿ ಮಾರ್ಪಟ್ಟಿತ್ತು. ಇದರಲ್ಲಿ ಗ್ಯಾಂಗ್ಸ್ಟರ್ಗಳ ಕುಟುಂಬದ ಸದಸ್ಯರನ್ನು ಸಹ ಗುರಿಯಾಗಿಸಲಾಗುತ್ತಿದೆ. ಬಟಾಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರನ್ನು ಮತ್ತು ಘಟನೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದಾರೆ. ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.