ಪುರಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಒಡಿಶಾದ ಪುರಿಯಲ್ಲಿ ಶುಕ್ರವಾರ ಅದ್ಧೂರಿಯಾಗಿ ಆರಂಭಗೊಂಡಿದೆ. ಸಾಕ್ಷಾತ್ ದೇವರೇ ಬೀದಿಗಿಳಿದು ಭಕ್ತರಿಗೆ ದರ್ಶನ ನೀಡುವ ಈ ದೈವಿಕ ಯಾತ್ರೆಯು ಪವಿತ್ರವಾದ 3 ಕಿಲೋಮೀಟರ್ ದೂರದ ರಥದ ಮೆರವಣಿಗೆಯೊಂದಿಗೆ ಪ್ರಾರಂಭವಾಗಿದ್ದು, ನೆರೆದಿದ್ದ ಲಕ್ಷಾಂತರ ಭಕ್ತರು ಅಪಾರ ಶ್ರದ್ಧೆಯಿಂದ ಜಗನ್ನಾಥನನ್ನು ಕಣ್ತುಂಬಿಕೊಂಡರು.
ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಯಾತ್ರೆಗೆ ಚಾಲನೆ
ರಥಯಾತ್ರೆಯು ಬೆಳಗ್ಗೆ 6:00 ಗಂಟೆಗೆ ಮಂಗಳ ಆರತಿಯೊಂದಿಗೆ ಪ್ರಾರಂಭವಾಯಿತು. ಇದು ದಿನವಿಡೀ ನಡೆಯುವ ಧಾರ್ಮಿಕ ವಿಧಿವಿಧಾನಗಳಿಗೆ ಮುನ್ನುಡಿ ಬರೆಯಿತು. ನಂತರ ಸೂರ್ಯ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 3:30ಕ್ಕೆ ಚೇರಾ ಪನ್ಹಾರಾ ಎಂಬ ವಿಧ್ಯುಕ್ತ ಸಮಾರಂಭ ನೆರವೇರಲಿದ್ದು, ಈ ಸಮಾರಂಭದಲ್ಲಿ, ಪುರಿ ರಾಜಮನೆತನದ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಅವರು ರಥಗಳ ನೆಲವನ್ನು ಚಿನ್ನದ ಪೊರಕೆಯಿಂದ ಗುಡಿಸಿ, ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ, ಭಗವಾನ್ ಬಲಭದ್ರ, ದೇವಿ ಸುಭದ್ರ ಮತ್ತು ಭಗವಾನ್ ಜಗನ್ನಾಥರ ರಥಗಳನ್ನು ಎಳೆಯುವ ಕಾರ್ಯಕ್ರಮ ಪ್ರಾರಂಭವಾಗಲಿದೆ. ಭಕ್ತರ ಜೈಕಾರ ಮತ್ತು ಘೋಷಣೆಗಳ ನಡುವೆ ರಥಗಳು ಮೆಲ್ಲನೆ ಮುಂದೆ ಸಾಗಲಿವೆ.

ದೀರ್ಘಕಾಲದ ನಂತರ ದೇವರ ದರ್ಶನ
ಜೂನ್ 11ರಂದು ನಡೆದ ಸ್ನಾನ ಯಾತ್ರೆಯ (ಬೃಹತ್ ಸ್ನಾನದ ವಿಧಿ) ನಂತರ ಸಾರ್ವಜನಿಕ ದರ್ಶನವನ್ನು ನಿಲ್ಲಿಸಲಾಗಿತ್ತು. ಈ ಸ್ನಾನದ ವಿಧಿಯ ನಂತರ ದೇವರುಗಳಿಗೆ ಜ್ವರ ಬರುತ್ತದೆ ಎಂಬ ನಂಬಿಕೆಯಿದೆ. ಈ ಅವಧಿಯಲ್ಲಿ, ದೇವರುಗಳು ‘ಅನಾಸರ್ ಘರ್’ (ಪ್ರತ್ಯೇಕ ಕೊಠಡಿ) ನಲ್ಲಿ ರಹಸ್ಯವಾಗಿ ವಿಶ್ರಾಂತಿ ಪಡೆಯುತ್ತಾರೆ. ರಥಯಾತ್ರೆಗೆ ಮುನ್ನ ಹದಿನೈದು ದಿನಗಳ ಈ ಏಕಾಂತ ವಾಸದ ನಂತರ ದೇವರುಗಳು ಭಕ್ತರಿಗೆ ಮೊದಲ ಬಾರಿಗೆ ದರ್ಶನ ನೀಡುವ ಕಾರಣ, ಅವರನ್ನು ನೋಡಲು ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆ.
ವ್ಯಾಪಕ ಭದ್ರತಾ ವ್ಯವಸ್ಥೆ
ಲಕ್ಷಾಂತರ ಭಕ್ತರು ಸೇರುವುದರಿಂದ, ರಥಯಾತ್ರೆಯ ಸಂದರ್ಭದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಪುರಿ ನಗರದಾದ್ಯಂತ ಮತ್ತು ಕೋನಾರ್ಕ್ಗೆ ಹೋಗುವ ರಸ್ತೆಗಳಲ್ಲಿ 275ಕ್ಕೂ ಹೆಚ್ಚು ಎಐ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತೆಯನ್ನು ಇನ್ನಷ್ಟು ಬಲಪಡಿಸಲು, ಪೊಲೀಸ್ ಡ್ರೋನ್ಗಳು, ವಿಧ್ವಂಸಕ ಕೃತ್ಯ ನಿಗ್ರಹ ತಂಡಗಳು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಶ್ವಾನದಳಗಳನ್ನು ನಿಯೋಜಿಸಲಾಗಿದೆ. ಸಮುದ್ರತೀರದ ಭದ್ರತೆಯನ್ನು ನೋಡಿಕೊಳ್ಳಲು ನೌಕಾ ಪೊಲೀಸ್, ಕರಾವಳಿ ರಕ್ಷಕ ಪಡೆ ಮತ್ತು ಭಾರತೀಯ ನೌಕಾಪಡೆಯನ್ನೂ ನಿಯೋಜಿಸಲಾಗಿದೆ.

ಈ ರಥಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಒಡಿಶಾದ ಶ್ರೀಮಂತ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಕನ್ನಡಿ ಹಿಡಿಯುವ ಒಂದು ಅದ್ಭುತ ವಾರ್ಷಿಕ ಉತ್ಸವವಾಗಿದೆ.-