ರಾಜ್ಯ ರಾಜಕೀಯದಲ್ಲಿ ಗುರುವಾರದ ರಾಜಕೀಯ ವಿದ್ಯುತ್ ಸಂಚಲನವನ್ನೇ ಸೃಷ್ಟಿಸಿದೆ. ದೊಡ್ಡ ಕ್ರಾಂತಿಯ ಮುನ್ಸೂಚನೆ ನೀಡಿರುವ ಸಚಿವ ಕೆ.ಎನ್. ರಾಜಣ್ಣ ಮಾತಿನ ಹಿಂದಿನ ಮರ್ಮವಾದರೂ ಏನು ಅನ್ನೋದೀಗ ಕುತೂಹಲದ ಪ್ರಶ್ನೆಯಾಗಿದೆ.
ಹಾಗೆ ನೋಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದ್ದಂತೆ, ಪಕ್ಷದ ಅಧ್ಯಕ್ಷರ ಬದಲಾವಣೆಯ ಕೂಗೂ ಮಾರ್ದನಿಸಿತ್ತು. ಆದರೆ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಡಿ.ಕೆ. ಶಿವಕುಮಾರ್ ರನ್ನು ಅಂದು ಉಪ ಮುಖ್ಯಮಂತ್ರಿ ಮಾಡುವ ಮೂಲಕ, ಅಧ್ಯಕ್ಷ ಗಾದಿಯನ್ನೂ ಧಾರೆ ಎರೆದು ಶಾಂತವಾಗಿಸಲಾಗಿತ್ತು. ಆದರೀಗ ಸಮಯ ಬದಲಾಗಿದೆ. ಪಕ್ಷದ ಹಿರಿಯರು ಡಿಕೆ ಬದಲಾವಣೆಗೆ ಬಿಗಿ ಪಟ್ಟು ಹಿಡಿದಿದ್ದಾರೆ. ಅದರಲ್ಲೂ ಹೆಚ್ ಸಿ ಮಹದೇವಪ್ಪ, ಪರಮೇಶ್ವರ್, ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಅಧ್ಯಕ್ಷ ಕುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ.
ಹೀಗಾಗಿ ಪಕ್ಷದ ಹೈಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡ ಹೇರಲಾಗಿತ್ತಾದರೂ ವರಿಷ್ಠರು ಮಾತ್ರ ಜಗ್ಗುತ್ತಿಲ್ಲ. ಮೊನ್ನೆಯ ಸಿಎಂ ದೆಹಲಿ ಪ್ರವಾಸದಲ್ಲೂ ವರಿಷ್ಠರ ಮುಂದೆ ಅಧ್ಯಕ್ಷರ ಬದಲಾವಣೆ ವಿಚಾರವವನ್ನು ಪ್ರಸ್ತಾಪಿಸಲಾಗಿತ್ತು. ಆದರೆ, ಸದ್ಯಕ್ಕೆ ಕಾದು ನೋಡುವ ಅಂತಾ ಹೇಳುವ ಮೂಲಕ ಎಐಸಿಸಿ, ಈ ಹಿರಿಯ ನಾಯಕರ ಕೋಪವನ್ನು ಹೆಚ್ಚಿಸಿದೆ. ಹೀಗಾಗಿಯೇ ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ಇದೀಗ ಬದಲಾವಣೆ ನಿಶ್ಚಿತ ಅನ್ನೋ ಬಾಂಬ್ ಸ್ಫೋಟಿಸಿ ಕ್ರಾಂತಿಯ ಕಹಳೆ ಮೊಳಗಿಸಿದ್ದಾರೆ. ಇದರ ನಡುವೆ, ಕೆಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ನಾವೂ ಅಧ್ಯಕ್ಷ ಗಾದಿ ಆಕಾಂಕ್ಷಿಗಳು ಅಂತಾ ಘೋಷಿಸಿಕೊಂಡಿದ್ದಾರೆ.