ಮಂಗಳೂರು: ಮಂಗಳೂರು ಜೈಲಿನಲ್ಲಿ ಕೈದಿಗಳು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಮಂಗಳೂರಿನ ಕೊಡಿಯಾಲ್ ಬೈಲ್ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜೈಲಿನ ಒಳಗಡೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉಳ್ಳಾಲದ ನಟೋರಿಯಸ್ ರೌಡಿ ಮುಖ್ತಾರ್ ಹಾಗೂ ಇನ್ನಿತರ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಮುಖ್ತಾರ್ ಎಂಬ ಕೈದಿ ಮತ್ತೋರ್ವ ಕೈದಿ ಕೇಶವ ಎಂಬಾತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆಗೊಳಗಾದ ಕೈದಿ ಕೇಶವ್ ನನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಲ್ಲೆಗೊಳಗಾಗಿರುವ ಕೇಶವ ಕೊಲೆ ಆರೋಪಿ ಎನ್ನಲಾಗಿದೆ. ಉಳ್ಳಾಲ ಧರ್ಮನಗರ ನಿವಾಸಿಯಾಗಿರುವ ಆರೋಪಿ ಮಹಮದ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ. ಮುಖ್ತಾರ್ ವಿರುದ್ಧ ಸುಮಾರು 15 ಪ್ರಕರಣಗಳಿವೆ ಎನ್ನಲಾಗಿದೆ. 2022ರ ಜುಲೈನಲ್ಲಿ ಕಾಲಿಗೆ ಗುಂಡಿಕ್ಕಿ ಮುಖ್ತಾರ್ ನನ್ನು ಬಂಧಿಸಲಾಗಿತ್ತು. ಸದ್ಯ ಜೈಲಿಗೆ ಬರ್ಕೆ ಠಾಣೆ ಪೊಲೀಸರು ಹಾಗೂ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.