ಸದ್ಯಕ್ಕೆ ಹಗರಣಗಳಿಂದಲೇ ಸದ್ದು ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ನಲ್ಲಿ ಸದ್ದಿಲ್ಲದೆ ಸಂಪುಟ ಪುನಾರಚನೆ ಕಸರತ್ತು ನಡೆದಿದೆಯಾ? ಹೌದು, ನಿನ್ನೆಯಷ್ಟೇ ದೆಹಲಿಯಿಂದ ವಾಪಸ್ ಆಗಿರುವ ಸಿದ್ದರಾಮಯ್ಯ ಹೊಸದೊಂದು ಸೂತ್ರ ಹಿಡಿದು ಬೆಂಗಳೂರಿಗೆ ಮರಳಿದ್ದಾರೆ.
ಸಂಪುಟ ವಿಸ್ತರಿಸುವಂತೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಅದಕ್ಕೊಂದು ಪರಿಹಾರ ಸೂತ್ರವನ್ನು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲೇ ಕಾರ್ಯಪ್ರವೃತ್ತರಾಗಿರುವ ಸಿದ್ದರಾಮಯ್ಯ ಶೀಘ್ರವೇ ಸಂಪುಟವನ್ನು ಪುನಾರಚಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ. ಪಕ್ಷದ ಹೈಕಮಾಂಡ್ ಈ ಬಾರಿ ಸಂಪುಟ ಪುನಾರಚನೆಗೆ 70-30ರ ಅನುಪಾತವನ್ನು ರೂಪಿಸಿದೆ.
ಅಂದರೆ, ಸಂಪುಟದಲ್ಲಿ ಶೇ. 70ರಷ್ಟು ಹಿರಿಯರು ಶೇ.ರಷ್ಟು 30 ಯುವಕರಿಗೆ ಸ್ಥಾನ ನೀಡುವ ಸೂತ್ರ ಸಿದ್ಧಪಡಿಸಿದ್ದಾರೆ. ಈ ನಿಟ್ಟಿನಲ್ಲಿ 70 ವರ್ಷ ಮೇಲ್ಪಟ್ಟ 10 ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಿ, ಹೊಸಬರಿಗೆ ಸ್ಥಾನ ಕಲ್ಪಿಸುವ ಮನಸ್ಸು ಮಾಡಿದೆ.
ಪಕ್ಷದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಯುವಕರಿಗೆ ಆದ್ಯತೆ ನೀಡುವ ಉಮೇದಿದ್ದು, ಅಂಥವರ ಪಟ್ಟಿಯನ್ನು ರವಾನಿಸುವಂತೆ ಹೈಕಮಾಂಡ್ ಸಿಎಂಗೆ ಆದೇಶಿಸಿದೆ. ಇದರೊಟ್ಟಿಗೆ, ಪಕ್ಷದ ಹೆಚ್ಚಿನ ಹೊಣೆಗಾರಿಕೆ ನಿಭಾಯಿಸುವ ಶಕ್ತಿ ಇರುವ ಹಿರಿಯರನ್ನು ಸಂಪುಟದಿಂದ ವಿಮುಕ್ತಗೊಳಿಸಿ, ಅನ್ಯ ಜವಾಬ್ದಾರಿ ನೀಡುವ ಲೆಕ್ಕಾಚಾರ ನಡೆದಿದೆ. ಒಂದೊಮ್ಮೆ ಎಲ್ಲಾ ಅಂದುಕೊಂಡಂತೆ ನಡೆದ್ರೆ, ನವೆಂಬರ್ ವೇಳೆಗೆ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ.