ಸಿಎಂ ಸಿದ್ದರಾಮಯ್ಯ ತವರಿನಲ್ಲಿಂದು ರಣರೋಚಕ ಕದನ ನಡೆಯುತ್ತಿದೆ. ಸಹಕಾರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸಿಎಂ ಸಿದ್ದರಾಮಯ್ಯ ಇದೀಗ ಬ್ರಹ್ಮಾಸ್ತ್ರವನ್ನೇ ಹೂಡಿದ್ದಾರೆ.
ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಂದ್ರೆ ಎಂಸಿಡಿಸಿಸಿ ಬ್ಯಾಂಕ್ ನ 13 ನಿರ್ದೇಶಕರ ಸ್ಥಾನಗಳಿಗಿಂದು ಮೆಗಾ ಚುನಾವಣೆ ನಡೆಯುತ್ತಿದೆ. ಇಲ್ಲಿ ಜಿಟಿ ದೇವೇಗೌಡ ವರ್ಸಸ್ ಸಿದ್ದರಾಮಯ್ಯ ಅನ್ನೋ ಕದನ ಶುರುವಾಗಿದೆ.
ಸಹಕಾರ ಕ್ಷೇತ್ರದಲ್ಲಿ ಅತ್ಯಂತ ಬಿಗಿ ಹಿಡಿತ ಹೊಂದಿರುವ ಮಾಜಿ ಸಚಿವ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ, ಈ ಬಾರಿ ತಮ್ಮ ಪುತ್ರ ಹರೀಶ್ ಗೌಡರನ್ನ ಕಣಕ್ಕಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಶಾಸಕರಾದ ಅನಿಲ್ ಚಿಕ್ಕಮಾದು, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್ ಸ್ಪರ್ಧಿಸಿದ್ದಾರೆ. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗಾದ ಅಪಮಾನದ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಸಿಎಂ ಸಿದ್ದರಾಮಯ್ಯ ಜಿ.ಟಿ. ದೇವೇಗೌಡರ ಪ್ರಭಾವ ತಗ್ಗಿಸಲು ಶಾಸಕರನ್ನೇ ಸಮರಾಂಗಣಕ್ಕಿಳಿಸಿದ್ದಾರೆ. ಹರೀಶ್ ಗೌಡರನ್ನ ಮಣಿಸಿ, ವಿಜಯಪತಾಕೆ ಹಾರಿಸುವ ಇರಾದೆ ಸಿಎಂಗಿದೆ. ಆದರೆ ಅಂತಿಮವಾಗಿ ಫಲಿತಾಂಶ ಏನಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.