ಅನುದಾನ ವಿಚಾರವಾಗಿ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳುವವರಿಗೆ ನೂರು ದಾರಿ. ನಿಜ ಹೇಳುವವರಿಗೆ ಒಂದೇ ದಾರಿ. ನಾನು ಜೂನ್ 17 ರಂದು 50 ಕೋಟಿ ರೂ. ಅನುದಾನ ಕೇಳಿದ್ದೆ. ಮಂಜೂರು ಮಾಡಲು ಸಿಎಂ ಶಿಪಾರಸು ಮಾಡಿದ್ದಾರೆ. ಅನುದಾನಕ್ಕಾಗಿ ಮನೆಯಲ್ಲಿದ್ದುಕೊಂಡು ಸಿಎಂಗೆ ಪತ್ರ ಕೊಟ್ಟರೆ ಏನೂ ಆಗುವುದಿಲ್ಲ. ಶಾಸಕರು, ತಮ್ಮ ಪಿಎ ಕಡೆಯಿಂದ ಪತ್ರ ಕೊಟ್ಟು ಕೆಲಸ ಆಗಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಪತ್ರ ಕೊಟ್ಟ ಮೇಲೆ ಸಿಎಂ ಹಾಗೂ ಸಂಬಂಧ ಪಟ್ಟ ಮಂತ್ರಿಗಳ ಹತ್ತಿರ ತೆರಳಿ ಪಾಲೋ ಆಪ್ ಮಾಡಬೇಕು. ಸುಮ್ಮನೆ ಮನೆಯಲ್ಲಿದ್ದುಕೊಂಡು ಮಾತನಾಡಿದರೆ ಆಗುವುದಿಲ್ಲ. ನಾನೂ ಕೋಲಾರಕ್ಕೆ ಕೇಳಿದಾಗಲೆಲ್ಲಾ ಅನುದಾನ ಸಿಗುತ್ತಿದೆ. ನಮಗೆ ಅನುದಾನದ ಕೊರತೆಯಿಲ್ಲ. ಅಸಮಾಧಾನ ಹೊರಹಾಕಿರುವ ಶಾಸಕರು ಸಿಎಂ ಬಳಿ ಹೋಗಿ ನೇರವಾಗಿ ಅನುದಾನ ಕೇಳಿದ ಹಾಗಿಲ್ಲ ಎಂದು ಹೇಳಿದ್ದಾರೆ.
ಮುಳಬಾಗಿಲು ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂಬ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ 78 ವರ್ಷ ವಯಸ್ಸಾಗಿದೆ, ಕಾಲಿಗೆ ಬಿದ್ದು ಅನುದಾನ ಕೇಳಿ. ಕ್ಷೇತ್ರಕ್ಕಾಗಿ ಕೇಳಿಕೊಂಡರೆ ತಪ್ಪೇನಿಲ್ಲ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಬಗ್ಗೆ ಗೊತ್ತಿಲ್ಲ. ನಮಗೆ ಅನುಭವ ಆಗಿಲ್ಲ. ಕೋಲಾರಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.