ಬೆಂಗಳೂರು: ಸಿದ್ಧರಾಮಯ್ಯ ಅವರ ಹತ್ತಿರ ದುಡ್ಡಿಲ್ಲ. ಅದನ್ನು ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ಸತ್ಯ ಹೇಳಿದ್ದಕ್ಕೆ ನಾನು ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಸತ್ಯ. ಸರ್ಕಾರದಿಂದ ಏನೇ ತೆಗೆದುಕೊಳ್ಳಬೇಕಾದರೂ ಭ್ರಷ್ಟಾಚಾರ ಆಗುತ್ತದೆ. ಲಂಚ ಕೊಟ್ಟರೇ ಮಾತ್ರ ಎಲ್ಲ ಸಾಧ್ಯ. ಸ್ಮಾರ್ಟ್ ಮೀಟರ್ 1000 ರೂ ಇತ್ತು. ಅದನ್ನು ಏಳೆಂಟು ಸಾವಿರಕ್ಕೆ ಏರಿಕೆ ಮಾಡಿದ್ದಾರೆ. ಜನರ ಬಳಿ ಹಣ ವಸೂಲಿ ಮಾಡಲಾಗುತ್ತಿದೆ. ಅದರಿಂದ ಲೂಟಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಮೂರು ಮೂರು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಜನರಿಂದ ಹಣ ವಸೂಲಿ, ಬಡವರ ಮೇಲೆ ತೆರಿಗೆ ಹಾಕಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಕೆಇಬಿ ಅವರೂ ಭ್ರಷ್ಟಾಚಾರ ಆಗಿದೆ ಅಂತಾರೆ. ಇಲಾಖೆಯೇ ಭ್ರಷ್ಟಾಚಾರ ಆಗಿದೆ ಅಂದರೂ ಸರ್ಕಾರ ತುಟಿ ಬಿಚ್ಚುತ್ತಿಲ್ಲ. ಸರ್ಕಾರದ ಹಳಿ ತಪ್ಪಿದೆ. ಈ ಸರ್ಕಾರದಿಂದ ಜನ ಬೇಸತ್ತಿದ್ದಾರೆ ಎಂದಿದ್ದಾರೆ.
ಎಚ್.ಕೆ. ಪಾಟೀಲ್ ಮಂತ್ರಿ ಮಂಡಲದಲ್ಲಿದ್ದಾರೆ. ಅವರು ಕೂಡ ಸರ್ಕಾರದ ಆಡಳಿತದ ಬಗ್ಗೆ ಪತ್ರ ಬರೆದಿದ್ದಾರೆ. ಪಾಟೀಲರಿಗೆ ವಿಶ್ವಾಸವಿಲ್ಲ. ಪಾಟೀಲ್ ಮಾತು ಸಿಎಂ ಸಿದ್ಧರಾಮಯ್ಯ ಕೇಳಲ್ಲ. ಹೀಗಾಗಿ, ಪತ್ರ ಬರೆದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಜಿಂದಾಲ್ ಮೈನ್ಸ್ಗೆ ಜಾಗ ಕೊಡಬಾರದು ಅಂತಾ ಪತ್ರ ಬರೆದಿದ್ದರು. ಸರ್ಕಾರದ ಮಂತ್ರಿಗಳಿಗೆ ವಿಶ್ವಾಸ ಇಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಮೇಲೆ ಗುತ್ತಿಗೆದಾರರು ಆರೋಪ ಮಾಡಿದ್ದರು. ಗುತ್ತಿಗೆದಾರರ ಸಂಘದಿಂದ ದಾಖಲೆಗಳೇ ಇಲ್ಲದ ಆರೋಪ ಮಾಡಿಸಲಾಗಿತ್ತು. ಅದು ರಾಜಕೀಯ ಪ್ರೇರಿತ. ಅವರ ಬಳಿ ದಾಖಲೆಗಳೇ ಇರಲಿಲ್ಲ. ನಮ್ಮ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡಿಸಲಾಯಿತು. ಈಗ ಅಲ್ಲಿ ಏನು ಆಗುತ್ತಿದೆ? ಎಂದಿದ್ದಾರೆ.
ಶಾಸಕ ಬಿ.ಆರ್. ಪಾಟೀಲ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಅವರ ಪಕ್ಷದ ಶಾಸಕರೇ ಮಾಡಿರುವ ಆರೋಪ. ಈಗ ಈ ಆರೋಪಕ್ಕೆ ಸರ್ಕಾರ ಏನು ಹೇಳುತ್ತೆ ನೋಡಬೇಕು. ನೇರವಾಗಿ ಯೋಜನಾ ಆಯೋಗದ ಉಪಾಧ್ಯಕ್ಷರೇ ಮಾಡಿರುವ ಆರೋಪ ಇದು. ಇದನ್ನು ಕ್ಯಾಬಿನೆಟ್ಗೆ ಏನಾದ್ರೂ ತರುತ್ತಾರಾ? ನೋಡೋಣ ಎಂದಿದ್ದಾರೆ.
ಯಡಿಯೂರಪ್ಪ ಅವರು ಒಂದು ಶಕ್ತಿ. ಅವರು ರಾಜ್ಯ ಪ್ರವಾಸ ಮಾಡುತ್ತಾರೆ ಎಂದರೆ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ಬರುತ್ತದೆ. ಅಮಿತ್ ಶಾ ಬಂದು ಹೋದ ಬಳಿಕ ಅವರೇನು ಪಕ್ಷದ ಕಚೇರಿಗೆ ಬರುತ್ತಿರುವುದು ಅಲ್ಲ. ಅವರು ಮೊದಲೇ ಪಕ್ಷದ ಕಚೇರಿಗೆ ಬಂದು ಹೋಗುತ್ತೇನೆ ಎಂಬ ನಿರ್ಧಾರ ಮಾಡಿದ್ದರು. ಈಗ ಅವರು ಪಕ್ಷದ ಕಚೇರಿಗೆ ಬರುತ್ತಿದ್ದಾರೆ. ಇದು ಕಾಕತಾಳೀಯ ಅಷ್ಟೇ ಎಂದಿದ್ದಾರೆ.