ಇತಿಹಾರಸವೇ ಹಾಗೆ, ಎಷ್ಟು ಬಾರಿ ತಿರುವಿ ಹಾಕಿದ್ರೂ ಅಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊಳ್ಳುತ್ತಲೇ ಸಾಗುತ್ತದೆ. ಮೊಗೆದಷ್ಟೂ ಹೊರ ಬರುವ ಕಟು ಸತ್ಯಗಳು ನಿಜಕ್ಕೂ ಅಂದು ಘಟಿಸಿರಬಹುದಾಗ ಕರಾಳ ಘಟನೆಗಳನ್ನು ಜಗತ್ತಿನ ಮುಂದೆ ಅನಾವರಣ ಮಾಡುತ್ತಲೇ ಸಾಗುತ್ತವೆ. ಯೆಸ್. ಹಿಂದೂಸ್ತಾನದ ಚರಿತ್ರೆಯ ಕಪ್ಪು ಅಧ್ಯಾಯ ಅಂತಲೇ ಕರೆಸಿಕೊಳ್ಳೋ ಈ ಕತೆ ನಡೆದು ಬರೋಬ್ಬರಿ 50 ವರ್ಷಗಳು ಅಂದ್ರೆ ಅರ್ಧ ಶತಮಾನ ಗತಿಸಿ ಹೋಗಿದೆ.
ಆದ್ರೆ, ಈ 50 ವರ್ಷದಲ್ಲಿ ಭಾರತ ಯಾರೊಬ್ಬರ ನಿರೀಕ್ಷೆಗೂ ಸಿಲುಕದಂತೆ ಸ್ವಾವಲಂಬಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಅಪ್ರತಿಮ. ಆದ್ರೆ, 50 ವರ್ಷಗಳ ಹಿಂದಿನ ಆ ಸತ್ಯ ಕತೆ, ಇವತ್ತಿಗೂ ಎಂಥವರನ್ನೂ ಬೆಚ್ಚು ಬೀಳಿಸೋದು ಸುಳ್ಳಲ್ಲ. ಈ 50 ವರ್ಷದಲ್ಲಿ ತಲೆಮಾರುಗಳು ಬದಲಾಗಿರಬಹುದು. ಅಂದಿನ ಆ ಪರಿಸ್ಥಿತಿಗೆ ಮೂಕ ಸಾಕ್ಷಿಯಾದವರು ಇಂದು ಬೆರಳೆಣಿಕೆ ಮಂದಿ ಮಾತ್ರ. ಆದ್ರೆ, ಅವರ ಕಣ್ಣುಗಳಲ್ಲಿ ಅಂದಿನ ಭೀಕರತೆ, ಸ್ವಾತಂತ್ರ್ಯದ ದಮನ, ದಬ್ಬಾಳಿಕೆ, ಕ್ರೂರತೆಯ ಕರಿ ಛಾಯೆ ಮಾತ್ರ ಹಾಗೇ ಉಳಿದೆ. ಹೌದು, ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇದೀಗ 50 ವರ್ಷಗಳ ಸಂದಿವೆ..
ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ
ಅಪ್ರತಿಮ ವೀರಾಗ್ರಣಿ, ದಿಢೀರ್ ಶೂರ್ಪನಕಿ ಆಗಿದ್ಯಾಕೆ
ಆಂಗ್ಲರ ಕಪಿಮುಷ್ಠಿಯಿಂದ ಬಂಧಮುಕ್ತಕೊಂಡಿದ್ದ ಭಾರತ ತನ್ನನ್ನು ತಾನು ನಿರ್ಮಿಸಿಕೊಳ್ಳಬೇಕಿತ್ತು. ಆಗಷ್ಟೇ ಅಂಬೆಗಾಲಿಡುತ್ತಿದ್ದ ಪುಟಾಣಿ ಕೂಸು ಭಾರತ. ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ಸಂವಿಧಾನದ ಪೀಠಿಕೆ ಅಡಿಯಲ್ಲಿ ನವ ಭಾರತ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ತಂದೆಯಿಂದ ಬಳುವಳಿಯಾಗಿ ಬಂದ ಆಡಳಿತವನ್ನ ಅವತ್ತಿನವರೆಗೂ ಇಂದಿರಾ ನಿಭಾಯಿಸಿದ್ದ ಪರಿ ಆದರ್ಶನೀಯ.
ವೀರಾಗ್ರಣಿ, ಗಟ್ಟಿಗಿತ್ತಿ ಅಂತಲೇ ಕರೆಸಿಕೊಳ್ತಿದ್ದ ಕೆಚ್ಚೆದೆಯ ಕಲಿ ಇಂದಿರಾ, ನಿಜಕ್ಕೂ ಸಮಸ್ತ ಭಾರತವೇ ಆಗಿಹೋಗಿದ್ರು. ಆದ್ರೆ, ಮನುಷ್ಯನ ಅಧಿಕಾರದ ಹಪಹಪಿ, ಅದಕ್ಕಾಗಿನ ಸರ್ವಾಧಿಕಾರತ್ವ ಧೋರಣೆ, ಎಂಥವರನ್ನೇ ಆದ್ರೂ ಅಂಧರನ್ನಾಗಿಸುತ್ತೆ ಅನ್ನೋ ಮಾತಿದೆ. ಇದಕ್ಕೆ ಇಂದಿರಾ ಕೂಡಾ ಹೊರತಾಗಿರಲಿಲ್ಲ. ಹಾಗಾಗಿಯೇ ತಮ್ಮ ಸ್ವಾರ್ಥ ಸಾಧನೆಗಾಗಿ ಇಂದಿರಾ ಅಂದು ಸಾಧಿಸಿದ್ದು ಮಾತ್ರ ಹಿಟ್ಲರ್ ಸಂಸ್ಕೃತಿಯನ್ನು ಅನ್ನೋದು ದಿಟ. ಜೂನ್ 25 1975. ಹಿಂದೂಸ್ತಾನದ ಮಣ್ಣಲ್ಲಿ ಮೊದಲ ಬಾರಿ ತುರ್ತು ಪರಿಸ್ಥಿತಿ ಹೇರಲಾಯ್ತು.
ಚುನಾವಣಾ ಅಕ್ರಮಕ್ಕೆ ಬೆಲೆತೆತ್ತ ಪ್ರಧಾನಿ ಇಂದಿರಾ
ಕುರ್ಚಿಬಿಡಲೊಪ್ಪದ ಉಕ್ಕಿನ ಮಹಿಳೆಯ ತುಕ್ಕಿನ ಕೆಲಸ
1971…ಅಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸಂಸತ್ ಪ್ರವೇಶಿಸಿದ್ರು. ಪ್ರಧಾನಿ ಹುದ್ದೆಯನ್ನೂ ಅಲಂಕರಿಸಿದ್ರು. ಆದ್ರೆ ಈ ಚುನಾವಣೆ ಗೆಲುವಿಗೆ ಇಂದಿರಾ ಆಡಳಿತ ಯಂತ್ರವನ್ನೇ ದುರುಪಯೋಗ ಮಾಡಿಕೊಂಡಿದ್ದಾರೆ, ಅಪಾರ ಹಣದ ಹೊಳೆ ಹರಿಸಲಾಗಿದೆ ಅಂತಾ ಪರಾಜಿತ ಅಭ್ಯರ್ಥಿ ರಾಜ್ ನಾರಾಯಣ್, ಅಲಹಾಬಾದ್ ಹೈಕೋರ್ಟ್ ಮೊರೆ ಹೋದ್ರು.
ಸುದೀರ್ಘ ವಾದ-ಪ್ರತಿವಾದದ ಫಲ ನಿಜಕ್ಕೂ ಇಂದಿರಾ ಪರವಾಗಿರ್ಲ್ಲ. ಅಧಿಕಾರಿಗಳು ಮತ್ತು ಪೊಲೀಸರನ್ನು ದುರುಪಯೋಗ ಪಡಿಸಿಕೊಂಡ ಆರೋಪ ಸಾಬೀತಾದ ಬೆನ್ನಲ್ಲೇ, 1975 ಜೂನ್ 12ರಂದು ಇಂದಿರಾರ ಸಂಸದ ಸ್ಥಾನವನ್ನೇ ಹೈಕೋರ್ಟ್ ಅಸಿಂಧುಗೊಳಿಸಿತು. ಅಷ್ಟೇ ಅಲ್ಲಾ ಈ ಕುರಿತು ಮೇಲ್ಮನವಿ ಸಲ್ಲಿಸಲು ಇಂದಿರಾಗೆ 22 ದಿನಗಳ ಕಾಲಾವಕಾಶ ನೀಡಲಾಗಿತ್ತು. ನಿಜಕ್ಕೂ ಆನೆ ನಡೆದದ್ದೇ ಹಾದಿ ಎನ್ನುವಂತಿದ್ದ ಇಂದಿರಾ ವರ್ಚಸ್ಸಿಗೆ ಈ ಬೆಳವಣಿಗೆ ದೊಡ್ಡ ಛಡಿ ಏಟನ್ನೇ ನೀಡಿತ್ತು. ಅಲ್ಲಿಂದಲೇ ಆರಂಭವಾಗಿತ್ತು ಭಾರತದ ಅತ್ಯಂತ ದೊಡ್ಡ ಕರಾಳ ಚರಿತ್ರೆಯ ಆರಂಭ.
ಸುಪ್ರೀಂಕೋರ್ಟ್ ನಲ್ಲಿ ಅಲ್ಪ ರಿಲೀಫ್, ಇಂದಿರಾ ಸರ್ವಾಧಿಕಾರತ್ವ
ಬೀಸೋ ದೊಣ್ಣೆಯಿಂದ ಪಾರಾಗಲು ಇಂದಿರಾ ಹೇರಿದ್ರು ಎಮರ್ಜೆನ್ಸಿ
ಅಲಹಾಬಾದ್ ಹೈಕೋರ್ಟ್ ನಲ್ಲಿ ಸಂಸದ ಸ್ಥಾನವೇ ಅಸಿಂಧುವಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. 1975, ಜೂನ್ 24, ಸುಪ್ರೀಂಕೋರ್ಟ್ ಅಲ್ಪ ರಿಲೀಫ್ ಎನ್ನುವಂತೆ ಇಂದಿರಾಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟಿತ್ತು.
ಸದಸ್ಯತ್ವ ರದ್ದು ಆದೇಶಕ್ಕೆ ತಡೆ ನೀಡಿತ್ತಾದ್ರೂ,ಲೋಕಸಭೆಯಲ್ಲಿ ಇಂದಿರಾ ಮತದ ಹಕ್ಕನ್ನು ಸುಪ್ರೀಂಕೋರ್ಟ್ ನಿರ್ಬಂಧಿಸಿತ್ತು. ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಹೊರ ಬೀಳ್ತಿದ್ದಂತೆ ಇಂದಿರಾರ ರಾಜಕೀಯ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗಿದ್ವು. ಅಧಿಕಾರಶಾಹಿತ್ವದ ತಮ್ಮ ಕನವರಿಕೆಗೆ ನೀರಿರೆದ ಇಂದಿರಾ ಒಂದು ದೊಡ್ಡ ತಪ್ಪು ನಿರ್ಧಾರಕ್ಕೆ ಮುಂದಾಗಿದ್ರು.
ಗುಜರಾತ್ ನಿಂದ ಹೊತ್ತಿತ್ತು ಇಂದಿರಾ ವಿರೋಧಿ ಕಿಚ್ಚು
ಜಯಪ್ರಕಾಶ್ ನಾರಾಯಣರು ಮೊಳಗಿಸಿದ್ರು ಕ್ರಾಂತಿ ಕಹಳೆ
ಅದು 1974ರ ಕಾಲಮಾನ. ನಿಜಕ್ಕೂ ಕಾಂಗ್ರೆಸ್ ನ ಉಚ್ಛ್ರಾಯ ಸ್ಥಿತಿ. ಆದ್ರೆ, ಗಾಂಧಿ ನಾಡು ಗುಜರಾತ್ ನಲ್ಲೇ ಮೊದಲ ಕಿಚ್ಚು ಹೊತ್ತಿತ್ತು. ಜನವರಿಯಲ್ಲಿ ಗುಜರಾತ್ ನ ಆಡಳಿತಾರೂಢ ಚಿಮನ್ ಬಾಯ್ ಸರ್ಕಾರದ ವಿರುದ್ಧ ವಿದ್ಯಾರ್ಥಿ ದಂಗೆ ಶುರುವಾಗಿತ್ತು. ಮೆಸ್ ಊಟದ ಬೆಲೆ ಏರಿಕೆ ಖಂಡಿಸಿ ಆರಂಭವಾದ ಹೋರಾಟ ಮುಂದೆ ನವನಿರ್ಮಾಣ ಚಳವಳಿಯಾಗಿ ಬದಲಾಗಿದ್ದು, ಕ್ರಾಂತಿಯ ಮೊದಲ ಕಹಳೆ ಮೊಳಗಿತ್ತು. ಈ ಹೋರಾಟಕ್ಕೆ ಬೆಚ್ಚಿದ ಇಂದಿರಾ, ಒಲ್ಲದ ಮನಸ್ಸಿನಿಂದಲೇ ಸಿಎಂ ಚಿಮನ್ ಭಾಯ್ ಯನ್ನು ಕೆಳಗಿಳಿಸಿದ್ರು.
ಇನ್ನು ಏಪ್ರಿಲ್ ನಲ್ಲಿ ಪ್ರಜ್ವಲಿಸಿದ ಬಿಹಾರ್ ಛಾತ್ರ ಹೋರಾಟ ಇಂದಿರಾ ಕುರ್ಚಿಯನ್ನು ಅಲುಗಾಡಿಸಿತ್ತು. ಜಯಪ್ರಕಾಶ್ ನಾರಾಯಣರ ಸಾರಥ್ಯದಲ್ಲಿ ಸಂಪೂರ್ಣ ಕ್ರಾಂತಿ ಅಹಿಂಸಾ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿತ್ತು. ಮೇನಲ್ಲಿ ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡಿಸ್ ಕರೆ ನೀಡಿದ್ದ ರೈಲ್ವೆ ನೌಕರರ ವೇತನ ಹೆಚ್ಚಳ ಹೋರಾಟ ದೇಶದ ಚಹರೆಯನ್ನೇ ಬದಲಿಸಿಬಿಡ್ತು. ಮೂರು ವಾರಗಳ ಈ ಮುಷ್ಕರ ನಿಜಕ್ಕೂ ಇಂದಿರಾ ಪಾಲಿಗೆ ಬಿಸಿತುಪ್ಪವಾಗಿಬಿಡ್ತು.
ಇಂದಿರಾ ಹಠಾವೋ ಆರಂಭಿಸಿದ ಜಯಪ್ರಕಾಶ್ ನಾರಾಯಣ್
ದೆಹಲಿಯ ರಾಮ್ ಲೀಲಾ ಮೈದಾನದಿಂದ ಅಂತಿಮ ಚಿತಾವಣೆ
ಒಂದೆಡೆ, ದೇಶದ ಹಲವೆಡೆ ವಿದ್ಯಾರ್ಥಿ ಹೋರಾಟಗಳು, ಇನ್ನೊಂದೆಡೆ ಕಾರ್ಮಿಕ ಸಂಘಟನೆಗಳ ರೋಷಾವೇಷ. ಆಡಳಿತ ಹಳ್ಳಿ ತಪ್ಪಿ ಕೈಜಾರುತ್ತಿರೋದು ಇಂದಿರಾಗೆ ಮನವರಿಕೆ ಆಗಿತ್ತು. ಸಾಲದ್ದಕ್ಕೆ 1975ರ ಜೂನ್ 25ರಂದು ದೆಹಲಿಯ ರಾಮಲೀಲಾ ಮೈದಾನದಿಂದ ಒಂದು ಸಂದೇಶ ಬಂದಿತ್ತು. ಜಯಪ್ರಕಾಶ್ ನಾರಾಯಣರು ಕರೆ ನೀಡಿದ್ದ ಆ ಸಂದೇಶ ಇಂದಿರಾ ಹಠಾವೋ ಅಂತಾ ಮಾರ್ದನಿಸಿತ್ತು.
ಅಷ್ಟೇ, ಕೊರೆಯುವ ಚಳಿಯಲ್ಲೂ ಬೆವರಿದ್ದ ಇಂದಿರಾ, ತಮ್ಮ ಅಧಿಕಾರದ ದುರಾಸೆಗೆ ಬಿದ್ದಿದ್ರು. ಭಾರತವನ್ನು ಕತ್ತಲ ಕೂಪಕ್ಕೆ ದೂಡುವ ಕಠೋರ ನಿರ್ಧಾರ ಕೈಗೊಂಡಿದ್ರು. ಹಿಂದೂಸ್ತಾನದ ಚರಿತ್ರೆಯಲ್ಲೇ ಕಪ್ಪು ಚುಕ್ಕೆಯಾಗಿ ಉಳಿದ ನಿರ್ಧಾರ ಅಲ್ಲಿ ಆಗಿಹೋಗಿತ್ತು,. ಪರಿಸ್ಥಿತಿ ನಿಭಾಯಿಸೋದು ಅಸಾಧ್ಯ ಅಂತ ತಿಳಿದ ಇಂದಿರಾ, ಸಂಪುಟದ ಅನುಮೋದನೆಯನ್ನೂ ಪಡೆಯದೆ ನೇರಾನೇರ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ರನ್ನು ಅಸ್ತ್ರವಾಗಿಸಿಕೊಂಡು ಜೂನ್ 25, 1975ರ ಮಧ್ಯರಾತ್ರಿ 12ಕ್ಕೂ ಮುನ್ನವೇ ದೇಶವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಬಿಟ್ರು.
ಭಾರತದ ಕರಾಳ ಚರಿತ್ರೆಯ ಘನಘೋರ ಸತ್ಯಗಳು
ಅತಿರಥ ನಾಯಕರನ್ನೇ ಜೈಲಿಗಟ್ಟಿದ ಇಂದಿರಾ ಗಾಂಧಿ
ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಆಂತರಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಇದೆ ಅನ್ನೋ ಕಾರಣ ನೀಡಿದ್ದ ಇಂದಿರಾ, ದೇಶದಲ್ಲಿ ಎಮರ್ಜೆನ್ಸಿ ವಿಧಿಸಿದ್ರು. ಈ ಮೂಲಕ ತಮ್ಮ ಅಧಿಕಾರದ ಕುರ್ಚಿಗೆ ಅಂಟಿ ಕೂತಿದ್ರು. ಅಷ್ಟೇ ಅಲ್ಲಾ ಅಂದಿನ ಲೋಕಸಭೆಯ ಅವಧಿಯನ್ನು 1 ವರ್ಷ ಮುಂದುವರಿಸಲಾಯ್ತು. ಈ ಎಮರ್ಜೆನ್ಸಿ ಅನ್ನೋ ಮುಖವಾಡ ಧರಿಸಿ ಕಾಂಗ್ರೆಸ್ ನ ಗುಲಾಮರು, ದೇಶದಲ್ಲಿ ಮಾಡಬಾರದ ಅನಾಚಾರಗಳನ್ನು ಮಾಡಿದ್ದು ಸುಳ್ಳಲ್ಲ. ಅದ್ರಲ್ಲೂ ಅಟಲ್ ಬಿಹಾರಿ ವಾಜಪೇಯಿ, ಎಲ್ ಅಡ್ವಾಣಿ, ಜೆಹೆಚ್ ಪಟೇಲ್, ಹೆಚ್ ಡಿ ದೇವೇಗೌಡ ಸೇರಿದಂತೆ ದೇಶದ ಅಗ್ರಗಣ್ಯ ನಾಯಕರನ್ನೆಲಾ ಬಂಧಿಸಿ ಜೈಲಿಗಟ್ಟಲಾಯ್ತು.
ಇಂದಿರೆಯ ಮಗ ಸಂಜಯನ ಅಂಧಾದರ್ಬಾರ್
1 ಲಕ್ಷ ಜನರನ್ನು ಸೆರೆವಾಸಕ್ಕೆ ತಳ್ಳಿದ ತುರ್ತು ಮಹಿಳೆ
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗ್ತಿದ್ದಂತೆ ಅರಾಜಕತೆ ತಾಂಡವವಾಡಲು ಶುರುಮಾಡಿತ್ತು. ಪ್ರಶ್ನೆ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಾಗಿತ್ತು. ಇತ್ತ ಇಂದಿರಾ ಗಾಂಧಿ ಸುಪುತ್ರ, ಸಂಜಯ್ ಗಾಂಧಿ ಅಕ್ಷರಷ ಸರ್ವಾಧಿಕಾರಿ ರೂಪ ತಳೆದಿದ್ದ. ನಾನಾಡಿದ್ದೇ ಮಾತು, ತಾನು ರೂಪಿಸಿದ್ದೇ ಕಾನೂನು ಎನ್ನುವಂತೆ ಉದ್ಧಟತನಕ್ಕೆ ಬಿದ್ದ ಸಂಜಯ್, ನಿರಂಕುಶ ಆಡಳಿತವನ್ನು ಖುದ್ದು ಇಂದಿರೆಯಿಂದಲೂ ನಿಯಂತ್ರಿಸಲಾಗಲಿಲ್ಲ ಅನ್ನೋದು ಸತ್ಯ. ಸಮಸ್ತ ಅಧಿಕಾರವನ್ನೇ ತನ್ನ ಕೈವಶ ಮಾಡಿಕೊಂಡಿದ್ದ ಸಂಜಯ್, ಭಾರತದ ಅಭಿವೃದ್ಧಿಗೆ ಅಂತಾ 20 ಅಂಶಗಳ ಯೋಜನೆ ಜಾರಿಗೆ ತಂದ್ರು.
ಕೃಷಿ ಕ್ರಾಂತಿ, ಬಡತನ ನಿರ್ಮೂಲನೆ, ಕೈಗಾರಿಕೆ ಅಭಿವೃದ್ಧಿ , ಅನಕ್ಷರತೆ ತೊಲಗಿಸುವುದು ಮೂಲ ಉದ್ದೇಶವಾಗಿತ್ತು. ಇದರೊಟ್ಟಿಗೆ ದೇಶದಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಯನ್ನು ನಿಯಂತ್ರಿಸಲು ಸಂಜಯ್ ದೇಶವ್ಯಾಪಿ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾದ. ಪೊಲೀಸರು ಪುರುಷರನ್ನು ಅಟ್ಟಾಡಿಸಿ ಹಿಡಿದು ತಂದು ಸಂತಾನ ಹರಣ ಚಿಕಿತ್ಸೆ ಮಾಡಿಸಲು ಮುಂದಾದ್ರು. ಇನ್ನೊಂದೆಡೆ, ಇಂದಿರಾ ವಿರುದ್ಧ ಧ್ವನಿ ಎತ್ತಿದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಜೈಲಿಗೆ ಅಟ್ಟಲಾಗಿತ್ತು.
21 ತಿಂಗಳ ಅಂಧಾದರ್ಬಾರ್ ಗೆ ಪತರಗುಟ್ಟಿದ ಭಾರತ
ಎಮರ್ಜೆನ್ಸ್ ವೇಳೆ ಯಾವೆಲ್ಲಾ ಹಕ್ಕುಗಳಿಗೆ ಇತ್ತು ನಿರ್ಬಂಧ
ಒಂದಲ್ಲಾ ಎರಡಲ್ಲಾ ಬರೋಬ್ಬರಿ 21 ತಿಂಗಳು ಭಾರತ ತುರ್ತು ಪರಿಸ್ಥಿತಿಯ ಕರಿನೆರಳಲ್ಲಿ ಜೀವಿಸಿದ್ದು ನಿಜ. ಅತಿರಥ ನಾಯಕರೆಲ್ಲಾ ಜೈಲು ಸೇರಿದ್ರೆ ಇತ್ತ ಇಂದಿರೆಯ ಆಟಾಟೋಪವೂ ಮೇರೆ ಮೀರಿತ್ತು. ಮಾಧ್ಯಮ ಸ್ವಾತಂತ್ರವನ್ನೇ ಕಿತ್ತುಕೊಳ್ಳಲಾಗಿತ್ತು. ಪತ್ರಿಕೆ ಮುದ್ರಣಕ್ಕೂ ಮುನ್ನ ಸರ್ಕಾರದ ಪ್ರತಿನಿಧಿಗಳ ಸಮ್ಮತಿ ಅನಿವಾರ್ಯವಾಗಿತ್ತು. ಎಷ್ಟೋ ಪತ್ರಿಕೆಗಳು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಪಾದಕೀಯವನ್ನೇ ಖಾಲಿ ಮುದ್ರಿಸಿದ ನಿದರ್ಶನಗಳಿವೆ.
ಇನ್ನು ಈ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮನಬಂದಂತೆ ನಾಯಕರು, ಸಾರ್ವಜನಿಕರನ್ನು ಬಂಧನದಲ್ಲಿಡಲಾಯ್ತು. ರಾಜಕೀಯ ಕೈದಿಗಳಿಗೆ ಸೆರೆಮನೆಯಲ್ಲಿ ವಿಪರೀತ ಚಿತ್ರಹಿಂಸೆ ನೀಡಲಾಯ್ತು. ಸರ್ಕಾರದ ಸಮರ್ಥನೆಗೆ ದೂರದರ್ಶನವನ್ನು ಅಸ್ತ್ರವಾಗಿಸಿಕೊಳ್ಳಲಾಯ್ತು. ಮಾಧ್ಯಮದ ಸ್ವಾತಂತ್ರವನ್ನೇ ದಮನ ಮಾಡಲಾಗಿತ್ತು. ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ. ದೆಹಲಿಯ ತುರ್ಕ್ ವುನ್ ಗೇಟ್, ಜಾಮಾ ಮಸೀದಿ ವ್ಯಾಪ್ತಿಯ ಸ್ಲಂ ಜನಗಳನ್ನು ಒಕ್ಕಲೆಬಿಸಲಾಯ್ತು,. ಇಂದಿರಾಗೆ ಅನುಕೂಲವಾಗುವಂತೆ ಕಾನೂನಿಗೇ ತಿದ್ದುಪಡಿಯನ್ನೂ ತರಲಾಯ್ತು.
ಈ ಮೂಲಕ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ಶಾಂತಿಯುತವಾಗಿ ಒಂದೆಡೆ ಸೇರುವುದು, ಸಂಘ ಸಂಸ್ಥೆಗಳನ್ನು ರಚನೆ ಮಾಡದಿರುವುದು, ದೇಶದೆಲ್ಲೆಡೆ ಸ್ವಂತತ್ರವಾಗಿ ಸಂಚರಿಸೋದಕ್ಕೂ ಬ್ರೇಕ್ ಹಾಕಲಾಗಿತ್ತು. ಸಾಲದ್ದಕ್ಕೆ ಆಸ್ತಿ ಖರೀದಿ, ಮಾರಾಟವನ್ನೂ ನಿಷೇಧಿಸಲಾಗಿತ್ತು. ಸ್ವತಂತ್ರವಾಗಿ ವ್ಯಾಪಾರ-ವಹಿವಾಟು ನಡೆಸುವ ಹಕ್ಕನ್ನೂ ಕಸಿದುಕೊಳ್ಳಲಾಗಿತ್ತು.
ದೇಶದೆಲ್ಲೆಡೆ ಇಂದಿರಾ ವಿರೋಧಿ ಅಭಿಯಾನಕ್ಕೆ ಮುನ್ನುಡಿ
ಪ್ರಜಾಪ್ರಭುತ್ವದ ಕೂಗಿಗೆ ಕಡೆಗೂ ತಲೆಬಾಗಿದ ಇಂದಿರಾ
ತುರ್ತು ಪರಿಸ್ಥಿತಿ ಹೇರಿ 21 ತಿಂಗಳುಗಳು ಉರುಳಿ ಹೋಗಿದ್ವು. ಜನಮಾನಸದಲ್ಲಿ ಇಂದಿರಾ ಎಡೆಗಿದ್ದ ಒಲವು ಬದಲಾಗಿತ್ತು. ಜನನಾಯಕಿ ಅಂತಾ ಕರೆಸಿಕೊಂಡಿದ್ದ ಇಂದಿರಾ ನಿಜಕ್ಕೂ ಆಗ ವಿಲನ್ ಆಗಿದ್ರು. ಸಂವಿಧಾನದ ಆಶಯಕ್ಕೇ ಎಳ್ಳೂನೀರು ಬಿಟ್ಟಿದ್ದ ನಾಯಕಿಗೆ ಕಡೆಗೂ ಜ್ಞಾನೋದಯವಾಗಿತ್ತು. ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದ ವಿರೋಧಿ ಕಿಚ್ಚು ಕಡೆಗೂ ಇಂದಿರಾ ಕುರ್ಚಿ ಬುಡಕ್ಕೂ ಬಂದು ನಿಂತಿತ್ತು. 21 ತಿಂಗಳ ನಿರಂಕುಶ ಆಡಳಿತಕ್ಕೆ ತಿಲಾಂಜಲಿ ಹಾಡಿದ್ದ ಇಂದಿರಾ, 1977ರ ಜನವರಿ 18ರಂದು ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಿ ಚುನಾವಣೆ ಘೋಷಿಸಿದ್ರು. ಅಲ್ಲಿಗೆ ಭಾರತದ ಕರಾಳ ಇತಿಹಾಸದ 21 ತಿಂಗಳ ನರಕ ಅಂತ್ಯವಾಗಿತ್ತು.
ಸರ್ವಾಧಿಕಾರಿ ಇಂದಿರಾಗೆ ಮಣ್ಣುಮುಕ್ಕಿಸಿದ ಮತದಾರ
ಅಂದಿನ ಕಾರಾಗೃಹವೇ ಇಂದಿನ ಫ್ರೀಡಂ ಪಾರ್ಕ್
21 ತಿಂಗಳ ಸರ್ವಾಧಿಕಾರತ್ವದ ಆಧಿಕಾರಕ್ಕೆ ತೆರೆಬಿದ್ದಿತ್ತು. ಇಂದಿರಾ ಮತ್ತೊಮ್ಮೆ ಜನರ ಮುಂದೆ ಹೋಗುವ ತೀರ್ಮಾನ ಮಾಡಿದ್ರು. ಇತ್ತ ಕಾಂಗ್ರೆಸ್ ವಿರೋಧಿ ನಾಯಕರನ್ನು ಒಗ್ಗೂಡಿಸಿದ್ದ ಜಯಪ್ರಕಾಶ್ ನಾರಾಯಣರು, ಬದಲಾವಣೆಯ ಹುಮ್ಮಸ್ಸು ಮೂಡಿಸಿದ್ರು. 1977ರ ಮಾರ್ಚ್ 21ರಂದು ಅಧಿಕೃತವಾಗಿ ಎಮರ್ಜೆನ್ಸಿ ತೆರವಾಗಿತ್ತು. 1977ರ ಮಾರ್ಚ್ 23ಕ್ಕೆ ಬಂದ ಮತದಾರನ ತೀರ್ಪು ಇಂದಿರಾ ಎನ್ನುವ ಹಿಟ್ಲರ್ ಮನಸ್ಥಿತಿಯ ಹೆಣ್ಣಿನ ಅಹಂಕಾರವನ್ನು ಸಂಹರಿಸಿತ್ತು.
ನಾನು ಅಂತಾ ಮೆರೆದ ಧೀಮಂತ ಮಹಿಳೆಯ ಗರ್ವಭಂಗವಾಗಿತ್ತು. ಕಾಂಗ್ರೆಸ್ ದೇಶದಲ್ಲಿ ಹೇಳ ಹೆಸರಿಲ್ಲದಂತೆ ಬೋರಲ ಬಿದ್ದಿತ್ತು. ಇಂದಿರೆ ಮತ್ತು ಆಕೆಯ ಮಗನ ದರ್ಪವಾತರವನ್ನು ಕಣ್ಣಾರೆ ಕಂಡವರು ಉಕ್ಕಿನ ಮಹಿಳೆಗೆ ಚಳ್ಳೆಹಣ್ಣು ತಿನ್ನಿಸಿದ್ರು. ಅಲ್ಲಿಗೆ, ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎನ್ನುವ ಹುಚ್ಚು ಭ್ರಮೆಯಲ್ಲಿದ್ದ ಗಟ್ಟಿಗಿತ್ತಿಯ ರಣರೋಚಕ ಅಧ್ಯಾಯಕ್ಕೂ ತೆರೆಬಿದ್ದಿತ್ತು. ಅಂದು ವಾಜಪೇಯಿ, ಅಡ್ವಾಣಿಯವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಸಿಡಲಾಗಿತ್ತು.
ಆ ಜೈಲೇ ಈಗ ಫ್ರೀಡಂ ಪಾರ್ಕ್ ಆಗಿರೋದು ವಿಶೇಷ,. ಒಟ್ನಲ್ಲಿ, ತುರ್ತು ಪರಿಸ್ಥಿತಿಯ ರಣಘೋರ ಇತಿಹಾಸಕ್ಕೀಗ 50ರ ಪ್ರಾಯ,. ಇಂದಿರೆ ಇಂದಿಲ್ಲ, ಸಂಜಯ್ ಇಂದು ನೆನಪಾಗಿಯೂ ಉಳಿದಿಲ್ಲ. ಆದ್ರೆ, ಅಧಿಕಾರವೆನ್ನೋ ಮದದಲ್ಲಿ ಸರ್ವೋಚ್ಛ ನಾಯಕರು ಮಾಡೋ ಒಂದು ತಪ್ಪು ನಿರ್ಧಾರ ಶತಮಾನಗಳೇ ಉರುಳಿದ್ರೂ ಅದರ ಪ್ರತಿಬಿಂಬಿದಿಂದ ಹೊರಬರಲಾಗದೆ ಪ್ರತಿಬಿಂಬಿಸೋದು ವಾಸ್ತವವೇ ಸರಿ.
ಸ್ಪೆಷಲ್ ಡೆಸ್ಕ್, ಕರ್ನಾಚಟಕ ನ್ಯೂಸ್ ಬೀಟ್