ಬೆಂಗಳೂರು: ವಂಚನೆ ಪ್ರಕರಣದಲ್ಲಿ ಐಶ್ವರ್ಯಗೌಡ ವಿರುದ್ಧ ತನಿಖೆ ನಡೆಯುತ್ತಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ಗೆ ಇಡಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.
11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅದರಂತೆ ನಾನು ವಿಚಾರಣೆಗೆ ಬಂದಿದ್ದೇನೆ. ಆದರೆ ಇದುವರೆಗೂ ಯಾರೂ ಮಾತನಾಡಿಸುತ್ತಿಲ್ಲ ಎಂದು ಗರಂ ಆಗಿದ್ದಾರೆ.ರಿಷೆಪ್ಸೆನ್ ನಲ್ಲಿ ಕೂರಿಸಿದಕ್ಕೆ ಡಿಕೆಸು ಗರಂ ಆಗಿದ್ದಾರೆ. 11 ಗಂಟೆಗೆ ಬರೋದಕ್ಕೆ ಹೇಳಿ ಇಲ್ಲಿ ಕುರಿಸ್ತೀರಾ? ನಮ್ಮಗೆ ಬೇರೆ ಕೆಲಸ ಇರಲ್ವಾ? ಯಾವ ಟೈಮ್ ಗೆ ಹೇಳಿದೀರಾ ಆ ಟೈಮ್ ಗೆ ಬಂದಿದೀನಿ ಎಂದು ಸೆಕ್ಯೂರಿಟಿ ವಿರುದ್ಧ ಗರಂ ಆಗಿದ್ದಾರೆ. ಆನಂತರ ಸೆಕ್ಯೂರಿಟಿ ಒಳಗೆ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.
ಇಡಿ ಕಚೇರಿಗೆ ಹೋಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಡಿಕೆ ಸುರೇಶ್ ಮಾತನಾಡಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ, ನನ್ನಿಂದ ಕೆಲವು ಮಾಹಿತಿಗಳನ್ನು ಕೇಳಿದ್ದರು. ನಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಆದರೆ, ನನಗೆ ಸಂಬಂಧ ಇಲ್ಲದ ವಿಷಯ ಇದು. ಆದರೂ ನನಗೆ ಯಾವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಆ ಮಹಿಳೆ ನನ್ನ ಸಹೋದರಿಯ ಅಂತ ಮೌಖಿಕವಾಗಿ ಹೇಳಿ ಮೋಸ ಮಾಡಿದ್ದಾರೆ. ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದಿದ್ದಾರೆ.
ಅವರು ಕೇಳುವ ಪ್ರಶ್ನೆಗಳ ಮೇಲೆ ಇದಕ್ಕೆ ಸಂಬಂಧ ಇದೆಯಾ? ಇಲ್ವಾ? ಎನ್ನುವುದು ಗೊತ್ತಾಗುತ್ತದೆ. ಯಾವುದಕ್ಕೆ ಸಂಬಂಧ ಇದೆ? ಯಾವುದು ಅಸಂಬದ್ಧ?. ಆ ಮಹಿಳೆಯೊಂದಿಗೆ ಯಾವುದೇ ಹಣಕಾಸಿನ ಸಂಬಂಧ ಇಲ್ಲ. ಈ ಹಿಂದೆ ಕೂಡ ನಾನು ಅದನ್ನು ತಿಳಿಸಿದ್ದೇನೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಇದನ್ನು ಹೊರತುಪಡಿಸಿದರೆ ಅವರಿಗೆ ನನಗೆ ಯಾವುದೇ ಸಂಬಂಧ ಇಲ್ಲ.
ಅವರು ನನ್ನನ್ನು ಗೃಹ ಕಚೇರಿಯಲ್ಲಿ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದರು. ಕೆಲವು ವಿಚಾರಗಳನ್ನು ಚರ್ಚೆ ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ಇದ್ದರು ಎನ್ನುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲ ವಿಚಾರಗಳನ್ನು ಅಧಿಕಾರಿಗಳು ಕೇಳುತ್ತಾರೆ. ಅವರಿಗೆ ಹೇಳುತ್ತೇನೆ. ಆ ಮಹಿಳೆ ನನ್ನ ಧ್ವನಿ ಮಿಮಿಕ್ರಿ ಮಾಡಿ ಬೇರೆಯವರನ್ನು ವಂಚಿಸಿದ್ದಾರೆ. ಆ ವಿಷಯವಾಗಿ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿವೆ. ಆ ವಿಚಾರ ಎಲ್ಲ ನನಗೆ ಗೊತ್ತಿಲ್ಲ.
ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎಂಟ್ರಿ ಆಗಿದೆ. ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸ್ ನೀಡಿರುವುದೇ ಪ್ರಶ್ನೆಯಾಗಿ ಉಳಿದಿದೆ. ಇಡಿ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದೆ. ಆದರೂ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಂತೆ. ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಮುಂದೆ ಏನಾಗುತ್ತದೆಯೋ ಕಾಯ್ದು ನೋಡೋಣ ಎಂದು ಹೇಳಿದ್ದಾರೆ. ಈಗ ಡಿಕೆ ಸುರೇಶ್ ವಿಚಾರಣೆಯನ್ನೂ ಎದುರಿಸಿದ್ದಾರೆ.