ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ವಿಜಯೋತ್ಸವ ದುರಂತ ಬೆನ್ನಲ್ಲೇ ಬಿಸಿಸಿಐ ಬಿಗ್ ಬಾಸ್ ಗಳು ದೊಡ್ಡದೊಂದು ಬದಲಾವಣೆಯ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯೋತ್ಸವದಂಥಾ ಸಂದರ್ಭಗಳನ್ನು ಸೂಕ್ತವಾಗಿ ನಿಭಾಯಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದ ಅನಾಹುತಗಳನ್ನು ತಪ್ಪಿಸಲು ಬಿಸಿಸಿಐ ಮುಂದಾಗಿದೆ.
ನಿನ್ನೆ ನಡೆದ ಬಿಸಿಸಿಐ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ 10 ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ, ಟ್ರೋಫಿ ಗೆದ್ದ 3ರಿಂದ4 ದಿನಗಳ ಒಳಗೆ ಯಾವುದೇ ತಂಡಕ್ಕೂ ಸಂಭ್ರಮಾಚರಣೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಆತುರದ ಆಯೋಜನೆ ತಪ್ಪಿಸಲು ತ್ವರಿತ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗ್ತಿದೆ. ತಂಡಗಳು ಸಂಭ್ರಮಾಚರಣೆಗೂ ಮುನ್ನ ಬಿಸಿಸಿಐನಿಂದ ಅನುಮತಿ ಪಡೆಯೋದು ಕಡ್ಡಾಯಗೊಳಿಸಲಾಗುತ್ತಿದೆ.
ಮಂಡಳಿಯ ಲಿಖಿತ ಪೂರ್ವಾನುಮತಿ ಇಲ್ಲದೆ ಇನ್ಮುಂದೆ ಹರ್ಷೋತ್ಸವ ನಡೆಸುವಂತಿಲ್ಲ. ಕಡ್ಡಾಯವಾಗಿ 4ರಿಂದ 5 ಹಂತದಲ್ಲಿ ಭದ್ರತೆಯ ಪ್ರೊಟೋಕಾಲ್ ಪಾಲಿಸಬೇಕಿದೆ. ಕಾರ್ಯಕ್ರಮ ಸ್ಥಳ, ಮೆರವಣಿಗೆ ಸಾಗುವ ಹಾದಿ ಮತ್ತು ಆಟಗಾರರ ಭದ್ರತೆಗೆ ಒತ್ತು ನೀಡಲಾಗಿದೆ. ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಕಡ್ಡಾಯ. ಸಂಭ್ರಮಾಚರಣೆಗೆ ಕಾನೂನು ಬದ್ಧ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಸಮಿತಿ ಬಿಸಿಸಿಐಗೆ ವರದಿ ನೀಡಿದ್ದು, ಇದರ ಪೂರ್ಣ ಪ್ರಮಾಣದ ಜಾರಿ ಇನ್ನಷ್ಟೇ ಆಗಬೇಕಿದೆ.