ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲನೇ ಪಂದ್ಯವು ಹೆಡಿಂಗ್ಲಿಯಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ನಾಯಕ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕಗಳ ನೆರವಿನಿಂದ 479 ರನ್ಗೆ ಆಲ್ಔಟ್ ಆಗಿದೆ.
ಭಾರತ ತಂಡದ ಈ ಅದ್ಭುತ ಆರಂಭದ ಬೆನ್ನಲ್ಲೇ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ನಿಮ್ಮ ಭವಿಷ್ಯವಾಣಿಗಳು ಯಾವಾಗಲೂ ಸುಳ್ಳಾಗುತ್ತವೆ,” ಎಂದು ಲೇವಡಿ ಮಾಡಿದ್ದಾರೆ. ಈ ಬಾರಿ ಭಾರತ ತಂಡ ಸೋಲುತ್ತದೆ ಎಂದು ಹೇಳಬೇಡಿ ಎಂದು ಸಿಧು ಸಲಹೆ ನೀಡಿದ್ದಾರೆ.
ವಾನ್ ಭವಿಷ್ಯವಾಣಿಗೆ ಸಿಧು ಲೇವಡಿ
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಮೈಕಲ್ ವಾನ್, ಭಾರತ ತಂಡವು 3-1 ಅಂತರದಲ್ಲಿ ಸರಣಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರು. ಭಾರತ ತಂಡದ ಅನನುಭವ ಮತ್ತು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಅವರು ಉಲ್ಲೇಖಿಸಿದ್ದರು. ಆದರೆ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾದ ಆರಂಭಿಕ ಪ್ರದರ್ಶನ ವಾನ್ ಅವರ ಭವಿಷ್ಯವಾಣಿಯನ್ನು ಸುಳ್ಳುಗೊಳಿಸುವ ಸೂಚನೆ ನೀಡುತ್ತಿದ್ದಂತೆ, ನವಜೋತ್ ಸಿಂಗ್ ಸಿಧು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡ ವಿಡಿಯೊದಲ್ಲಿ ಮಾತನಾಡಿದ ನವಜೋತ್ ಸಿಧು, “ಮೂರ್ಖರನ್ನು ನೀರಸಗೊಳಿಸುವ ಅಗತ್ಯವಿಲ್ಲ. ಮೈಕಲ್ ವಾನ್, ನಿಮ್ಮ ಭವಿಷ್ಯವಾಣಿಗಳು ಯಾವಾಗಲೂ ತಪ್ಪಾಗಿರುತ್ತವೆ,” ಎಂದಿದ್ದಾರೆ. 2020/21ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ವಾನ್ ಅವರ ಭವಿಷ್ಯವಾಣಿಯನ್ನು ಸಿಧು ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಭಾರತ ತಂಡವು ಗಾಯದ ಸಮಸ್ಯೆಗಳ ಹೊರತಾಗಿಯೂ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ಇತ್ತೀಚಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು ಸೋಲಿಸಿದ್ದು, ಈ ಸಂಬಂಧ ವಾನ್ ಅವರ ಭವಿಷ್ಯವಾಣಿಯನ್ನು ಸಹ ಸಿಧು ಉಲ್ಲೇಖಿಸಿ ಇಂಗ್ಲೆಂಡ್ನ ಮಾಜಿ ಆಟಗಾರನ ಕಾಲೆಳೆದಿದ್ದಾರೆ.
ನೀವು ಶೋಚನೀಯ ಪರಿಸ್ಥಿತಿಯಲ್ಲಿದ್ದೀರಿ”
“ಮೈಕಲ್ ವಾನ್, ನಿಮ್ಮ ಭವಿಷ್ಯ ಯಾವಾಗಲೂ ಸುಳ್ಳಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಸಾಧ್ಯವಾಗುವುದಿಲ್ಲ ಎಂದು ನೀವು ಭವಿಷ್ಯ ನುಡಿದಿದ್ರಿ. ನೀವು ಈಗಲೂ ಭಾರತ ತಂಡ ಗೆಲ್ಲುತ್ತದೆ ಎಂದು ನೀವು ಭವಿಷ್ಯ ನುಡಿಯುವುದಿಲ್ಲ. ನಿಮ್ಮ ಬೌಲಿಂಗ್ ದಾಳಿಯನ್ನು ಒಮ್ಮೆ ನೋಡಿ, ಅವರು ನೆಲ ಕಚ್ಚಿದ್ದಾರೆ. ಭಾರತ ತಂಡದ ಮೂವರು ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ಬರುವಂತೆ ವೇಗದ ಬೌಲರ್ಗಳಿಗೆ ಮುಂದೆ ಬಂದು ಹೊಡೆಯುತ್ತಿದ್ದಾರೆ,” ಎಂದು ಸಿಧು ಕಿಡಿಕಾರಿದ್ದಾರೆ.
“ಬಾಸ್ ಮಾತುಗಳು ಏನನ್ನೂ ಸಾಬೀತುಪಡಿಸುವುದಿಲ್ಲ. ಮೊಟ್ಟೆ ಇಡುವಾಗ ಕೋಳಿ ಕೂಡ ಕ್ಷುದ್ರಗ್ರಹ ಇಡುತ್ತಿರುವಂತೆ ನಗುತ್ತದೆ. ನೀವು ನಿಮ್ಮ ಮಾತುಗಳನ್ನು ನಿಲ್ಲಿಸಿ ಬೇರೆ ಏನಾದರೂ ಮಾಡಿ. ಕರುಣೆ ಅವಮಾನಿಸದ ಯಾವುದೇ ನೋವು ಇಲ್ಲ. ಮನುಷ್ಯ, ನೀವು ಶೋಚನೀಯ ಪರಿಸ್ಥಿತಿಯಲ್ಲಿದ್ದೀರಿ,” ಎಂದು ನವಜೋತ್ ಸಿಂಗ್, ಇಂಗ್ಲೆಂಡ್ನ ಮಾಜಿ ನಾಯಕನಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.