ಮಂಗಳೂರು: 6ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನಲ್ಲಿ ತಮಿಳುನಾಡು ರಾಜ್ಯದ ಸರ್ಫರ್ಗಳು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದು, ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಶಿಪ್ ಸರಣಿಯ ಈ ಎರಡನೇ ಹಂತದಲ್ಲಿ ಲಭ್ಯವಿರುವ ಎಲ್ಲಾ ನಾಲ್ಕು ಪ್ರಮುಖ ವಿಭಾಗಗಳಲ್ಲೂ ವಿಜಯ ಪತಾಕೆಯನ್ನು ಹಾರಿಸಿದ್ದಾರೆ.
ಪುರುಷರ ಓಪನ್ ವಿಭಾಗದಲ್ಲಿ ತಮಿಳುನಾಡಿನ ಶ್ರೀಕಾಂತ್ ಡಿ ಚಾಂಪಿಯನ್ ಪಟ್ಟಕ್ಕೇರಿ ಮಿಂಚಿದರೆ, ಅರಬ್ಬೀ ಸಮುದ್ರದ ಅಲೆಗಳ ಮೇಲೆ ತಮ್ಮ ಛಾಪು ಮೂಡಿಸಿದ ಕಮಲಿ ಮೂರ್ತಿ ಮಹಿಳೆಯರ ಓಪನ್ ಹಾಗೂ ಗ್ರೂಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ ಏಕಸ್ವಾಮ್ಯ ಸಾಧಿಸಿ ದ್ವಿವಿಜಯದ ನಗುವನ್ನು ಬೀರಿದರು.
ಇನ್ನು ಯುವ ಪ್ರತಿಭೆಗಳಾದ ಗ್ರೂಮ್ಸ್ ಬಾಯ್ಸ್ (ಯು-16) ವಿಭಾಗದಲ್ಲಿ ತಮಿಳುನಾಡಿನವರೇ ಆದ ಪ್ರಹ್ಲಾದ್ ಶ್ರೀರಾಮ್ ಜಯಭೇರಿ ಬಾರಿಸಿ ತಮಿಳುನಾಡಿನ ಸರ್ಫಿಂಗ್ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಪ್ರತಿಕೂಲ ಹವಾಮಾನದ ನಡುವೆಯೂ ಯಶಸ್ವಿ ಆಯೋಜನೆ
ವಾಸ್ತವವಾಗಿ ಮೇ 30 ರಿಂದ ಜೂನ್ 1 ರವರೆಗೆ ನಡೆಯಬೇಕಿದ್ದ ಈ ಸ್ಪರ್ಧೆ ಮಂಗಳೂರಿನಲ್ಲಿ ಅರಬ್ಬೀ ಸಮುದ್ರದಲ್ಲಿನ ಮುಂಗಾರು ಚಟುವಟಿಕೆ ಮತ್ತು ಚಂಡಮಾರುತದ ಪ್ರಭಾವದಿಂದ ಉಂಟಾದ ಬಿರುಗಾಳಿ ಹಾಗೂ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು.
ಆದಾಗ್ಯೂ, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿ, ಮಂತ್ರ ಸರ್ಫ್ ಕ್ಲಬ್ ಆತಿಥ್ಯ ವಹಿಸಿದ್ದ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಸಾರ್ವಜನಿಕರ ಪ್ರವೇಶವಿಲ್ಲದೆ, ಕೇವಲ ಸ್ಪರ್ಧಾರ್ಥಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ನಡೆಸಲಾಯಿತು. ಆಯೋಜನಾ ಸಮಿತಿಯು ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಸ್ಪರ್ಧೆಯನ್ನು ಯಶಸ್ವಿಯಾಗಿ ಪುನರಾರಂಭಿಸಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿತ್ತು.
ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಮತ್ತು ಮಂತ್ರ ಸರ್ಫ್ ಕ್ಲಬ್ ನಿರ್ದೇಶಕ ರಾಮ್ ಮೋಹನ್ ಪರಂಜಪೆ ಅವರು ಈ ಕುರಿತು ಮಾತನಾಡಿ, “ಸ್ಪರ್ಧೆ ವಿಳಂಬವಾಗಿದ್ದರೂ, ಅದರ ಗುಣಮಟ್ಟ ಅತ್ಯುತ್ತಮವಾಗಿತ್ತು. ರಾಷ್ಟ್ರೀಯ ಸರಣಿಯ ಎರಡನೇ ಹಂತವಾಗಿದ್ದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅನ್ನು ರದ್ದುಗೊಳಿಸಿದ್ದರೆ, ಸ್ಪರ್ಧಾರ್ಥಿಗಳ ಶ್ರೇಯಾಂಕಗಳ ಮೇಲೆ ಅದು ಗಂಭೀರ ಪರಿಣಾಮ ಬೀರುತ್ತಿತ್ತು,” ಎಂದು ತಿಳಿಸಿದರು.
ಅಲೆಗಳ ಮೇಲೆ ವಿಜೇತರ ನಾಗಾಲೋಟ
ಹಿಂದಿನ ವರ್ಷ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಶ್ರೀಕಾಂತ್ ಡಿ, ಈ ಬಾರಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿ 14.63 ಅಂಕಗಳೊಂದಿಗೆ ಪುರುಷರ ಓಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಹಾಲಿ ರಾಷ್ಟ್ರೀಯ ಚಾಂಪಿಯನ್ ರಮೇಶ್ ಬುದಿಲಾಲ್ (11.87) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಶಿವರಾಜ್ ಬಾಬು (9.77) ಮತ್ತು ಸಂಜಯ್ ಸೆಲ್ವಮಣಿ (7.07) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡರು.
ಭಾರತದ ಅಗ್ರ ಮಹಿಳಾ ಸರ್ಫರ್ ಎಂಬ ತಮ್ಮ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದ ಕಮಲಿ ಮೂರ್ತಿ, ಮಹಿಳೆಯರ ಓಪನ್ ವಿಭಾಗದಲ್ಲಿ 13.33 ಅಂಕಗಳೊಂದಿಗೆ ಸುಗರ್ ಶಾಂತಿ ಬನರ್ಸ್ (10.50) ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಸೃಷ್ಟಿ ಸೆಲ್ವಂ 2.47 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಇನ್ನು, ಗ್ರೂಮ್ಸ್ ಗರ್ಲ್ಸ್ ವಿಭಾಗದ ಫೈನಲ್ನಲ್ಲಿ ಕಮಲಿ ಈ ಸ್ಪರ್ಧೆಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿ 15.50 ಅಂಕಗಳನ್ನು ಗಳಿಸಿದರು. ಆದ್ಯಾ ಸಿಂಗ್ (2.36) ಮತ್ತು ಸಾನ್ವಿ ಹೆಗ್ಡೆ (2.20) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಅಲಂಕರಿಸಿದರು.
ಗ್ರೂಮ್ಸ್ ಬಾಯ್ಸ್ (ಯು-16) ವಿಭಾಗದ ಫೈನಲ್ನಲ್ಲಿ ಪ್ರಹ್ಲಾದ್ ಶ್ರೀರಾಮ್ 11.06 ಅಂಕಗಳೊಂದಿಗೆ ಜಯ ದಾಖಲಿಸಿದರು. ಹರಿಷ್ ಪಿ (9.67) ಮತ್ತು ಸೊಮ್ ಸೇಥಿ (9.30) ಅವರೊಂದಿಗೆ ಈ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಭಾರತದಲ್ಲಿ ಸರ್ಫಿಂಗ್ ಕ್ರೀಡೆಯಲ್ಲಿ ಭರವಸೆಯ ಯುವ ಪ್ರತಿಭೆಗಳು ಹೊರಹೊಮ್ಮುತ್ತಿರುವುದನ್ನು ಇದು ಸೂಚಿಸುತ್ತದೆ.