ಐಟಿ ನೌಕರರಿಗೆ 12 ಗಂಟೆ ಕೆಲಸದ ಅವಧಿ ವಿಚಾರವನ್ನು ಕರ್ನಾಟಕ ಐಟಿ ಎಂಪ್ಲಾಯ್ ಯೂನಿಯನ್ ವಿರೋಧಿಸಿದೆ.
ಕೆಐಟಿಯು ಜನರಲ್ ಸೆಕ್ರೆಟರಿ ಸುಹಾಸ್ ಅಡಿಗ ಮಾತನಾಡಿ, ಇದು ಆಧುನಿಕ ಗುಲಾಮಗಿರಿ ಎಂದಿದ್ದಾರೆ. ಕಾರ್ಮಿಕನ ವೈಯಕ್ತಿಕ ಜೀವನವದ ಮೂಲಭೂತ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ. ಈ ತಿದ್ದುಪಡಿಗೆ ನಮ್ಮ ವಿರೋಧವಿದೆ. ಈ ತಿದ್ದುಪಡಿಯ ಮೂಲಕ ಮೂರು ಶಿಫ್ಟ್ ಬದಲು 2 ಶಿಫ್ಟ್ ಆಗುವ ಸಾಧ್ಯತೆ ಇದೆ. ಕಂಪನಿಗಳಲ್ಲಿ ಮೂರು ಶಿಫ್ಟ್ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈಗ 12 ಗಂಟೆಯ ಅವಧಿ ಬದಲಾಯಿಸಿ ಎರಡು ಶಿಫ್ಟ್ ವ್ಯವಸ್ಥೆಗೆ ಹೋಗಲು ದಾರಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ, ಇದರಿಂದಾಗಿ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳನ್ನು ಉದ್ಯೋಗದಿಂದ ಹೊರ ಹಾಕಲಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಐಟಿ ವಲಯದಲ್ಲಿ ಅತಿಯಾದ ಕೆಲಸದ ಒತ್ತಡದಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿವೆ. ಸಾವುಗಳು ಮತ್ತು ಆತ್ಮಹತ್ಯೆಗಳು ಹೆಚ್ಚಳವಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲಸದ ಸಮಯವನ್ನು ಹೆಚ್ಚಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ. ಕರ್ನಾಟಕ ಸರ್ಕಾರವು ತಮ್ಮ ಕಾರ್ಪೊರೇಟ್ ಬಾಸ್ಗಳನ್ನು ಮೆಚ್ಚಿಸುವ ಹಸಿವಿನಲ್ಲಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ. ಈ ಮೂಲಕ ವ್ಯಕ್ತಿಯ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. 2024ರಲ್ಲಿಯೂ ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ 14 ಗಂಟೆಗಳ ಕೆಲಸ ಮಾಡುವುದರ ಬಗ್ಗೆ ಮಾತುಗಳ ಕೇಳಿ ಬಂದಿದ್ದವು. ಆ ವೇಳೆಯೂ ಕೆಲಸದ ಸಮಯವನ್ನು ಹೆಚ್ಚಿಸಲು ಪ್ರಯತ್ನಿಸಲಾಗಿತ್ತು. ಆಗ ಸತತ ಪ್ರಯತ್ನದಿಂದ ಆ ನಿರ್ಧಾರವನ್ನ ತಡೆಹಿಡಿದಿದ್ದೆವು.
ಈಗಲೂ ಸರ್ಕಾರದ ನಿರ್ಧಾರವನ್ನ ವಿರೋಧಿಸಲು ಐಟಿ, ಐಟಿಇಎಸ್ ಉದ್ಯೋಗಿಗಳು ಒಗ್ಗೂಡಿ ಒಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೇಳಬೇಕೆಂದು ಕರೆ ಕೊಟ್ಟಿದ್ದಾರೆ.