ಬೆಂಗಳೂರು: ನಗರದಲ್ಲಿ ಮರ ಬಿದ್ದು ಹಲವು ಸೋವು -ನೋವು ಸಂಭವಿಸುತ್ತಿವೆ. ಹೀಗಾಗಿ ಬಿಬಿಎಂಪಿಯು ಮರ ಬಿದ್ದು ಸಾವು ಅಥವಾ ಗಾಯವಾದರೆ ಪರಿಹಾರ ನೀಡಲಾಗುವುದು ಎಂದು ಘೋಷಿಸಿದೆ. ಆದರೆ, ಹಲವರು ಇದನ್ನೇ ಬಂಡವಾಳ ಮಾಡಿಕೊಂಡು ಪಾಲಿಕೆ ಯಾಮಾರಿಸಲು ಮುಂದಾಗುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿವೆ.
ಇತರೆ ಅಪಘಾತ ಸಂಭವಿಸಿದರೂ ಮರ ಬಿದ್ದಿದೆ ಎಂದು ತೋರಿಸಿ ಪರಿಹಾರ ಒದಗಿಸುವಂತೆ ಪಾಲಿಕೆಗೆ ನಕಲಿ ಅರ್ಜಿಗಳು ಬರುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ನಕಲಿ ಅರ್ಜಿಗಳ ಹಾವಳಿ ತಪ್ಪಿಸಲು ಪಾಲಿಕೆ ಕೂಡ ಮೆಗಾಪ್ಲ್ಯಾನ್ ಮಾಡಿದೆ. ಮರ, ಕೊಂಬೆ ಬಿದ್ದು ಸಾವಾದರೆ ಇನ್ಶೂರೆನ್ಸ್ ಕ್ಲೈಮ್ ಮಾಡಲು ಪಾಲಿಕೆ ಮುಂದಾಗಿದೆ. ಪಾಲಿಕೆಯಿಂದ ಇನ್ಶೂರೆನ್ಸ್ ಕಂಪನಿಗೆ ಶಾಶ್ವತ ಮೊತ್ತ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಮರ ಬಿದ್ದು ಗಾಯ, ಸಾವಾದರೆ ಇನ್ಶುರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.
ಇನ್ನೊಂದೆಡೆ ನಗರದಲ್ಲಿ ಮರ ಗಣತಿ ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ 7 ಲಕ್ಷ ಮರಗಳ ಗಣತಿ ಕಾರ್ಯ ಮುಗಿದಿದೆ. ಮರ ಗಣತಿ ವೇಳೆ ಮತ್ತಷ್ಟು ಮರಗಳು ಜನರ ಬಲಿಗಾಗಿ ಕಾದು ಕುಳಿತಿವೆ ಎನ್ನಲಾಗುತ್ತಿದೆ. ಶೇ. 5ರಷ್ಟು ಮರಗಳು ಡೇಂಜರ್ ನಲ್ಲಿವೆ ಎಂದು ಗಣತಿ ಅಂಕಿ-ಸಂಖ್ಯೆ ಹೇಳುತ್ತಿದೆ. 70 ರಿಂದ 80 ವರ್ಷ ಹಳೆಯದಾದ ಸುಮಾರು 35 ಸಾವಿರ ಮರಗಳ ತೆರವಿಗೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥ ಸ್ವಾಮಿ ಮಾತನಾಡಿದ್ದಾರೆ.