ಬೆಂಗಳೂರು: ನೆಲಮಂಗಲದಲ್ಲಿ ರೌಡಿಶೀಟರ್ ಗಳ ಹಾವಳಿ ಮಿತಿ ಮೀರುತ್ತಿದ್ದು, ಸೈಟ್ ಕೊಡಿಸುತ್ತೇನೆಂದು ಹೇಳಿ ಅಮಾಯಕರಿಂದ ದುಡ್ಡು ಪಡೆದು ವಂಚಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.
ಸೈಟ್ ಕೊಡಿಸುತ್ತೇನೆಂದು ಹೇಳಿ ಹಣ ಪಡೆದು ನಟೋರಿಯಸ್ ರೌಡಿ ಶೀಟರ್ ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸೈಟ್ ಕೊಡಿಸುತ್ತೇನೆಂದು ಹೇಳಿ 15 ಲಕ್ಷ ರೂ. ಹಣವನ್ನು ರೌಡಿ ಪರಿಚಯಸ್ಥ ಯತೀಶ್ ಎಂಬುವವರ ಬಳಿ ಹಣ ಪಡೆದಿದ್ದ ಎನ್ನಲಾಗಿದೆ. ಒಂದು ವರ್ಷದ ಹಿಂದೆ ಹಣ ಪಡೆದು ಈಗ ಸೈಟ್ ಕೊಡದೆ ವಂಚಿಸಿರುವ ಆರೋಪ ಕೇಳಿ ಬಂದಿದೆ.
ತಕರಾರು ಇರುವ ಸೈಟ್ ಕೊಡಿಸಿ ಟೋಪಿ ಹಾಕಲು ಬೆತ್ತನಗೆರೆ ಶಂಕರ ಯತ್ನಿಸಿದ್ದ ಎನ್ನಲಾಗಿದೆ. ಇದರಿಂದಾಗಿ ಎಚ್ಚೆತ್ತುಕೊಂಡ ಯತೀಶ್, ನನಗೆ ನನ್ನ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ರೌಡಿಶೀಟರ್ ಶಂಕರ್ ಮಾತ್ರ ಒಂದು ವರ್ಷದಿಂದ ಸತಾಯಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಂಕರನ ತಾಯಿಗೆ ಯತೀಶ್ ಕರೆ ಮಾಡಿದ್ದ. ಮಗನ ಆಪರೇಷನ್ ಇದ್ದ ಹಿನ್ನೆಲೆಯಲ್ಲಿ ಯತೀಶ್ ಹಣ ಕೇಳಿದ್ದ.
ಹೀಗಾಗಿ ಶಂಕರ್, ಯತೀಶ್ ಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹಣ ಕೊಡಲ್ಲ. ನನ್ನ ತಾಯಿಗೆ ಕರೆ ಮಾಡಿ ನನ್ನ ಮರ್ಯಾದೆ ತೆಗೆಯುತ್ತೀಯಾ? ನಾನು ಕೊಟ್ಟಾಗಲೇ ಹಣ ಮರಳಿ ಪಡೆಯಬೇಕಿತ್ತು. ಇಲ್ಲ ಅಂದ್ರೆ ನಿನ್ನನ್ನು ಕಾರ್ ನಿಂದ ಗುದ್ದಿ ಕೊಲೆ ಮಾಡುತ್ತಿನಿ ಎಂದು ಬೆದರಿಕೆ ಹಾಕಿದದಾನೆ ಎನ್ನಲಾಗಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.