ಇಂದು ರಾಜ್ಯ ಬಿಜೆಪಿ ನಾಯಕರನ್ನು ಕರೆಯಿಸಿ ಸತತ ನಾಲ್ಕು ಗಂಟೆಗಳ ಕಾಲ ಆರೆಸ್ಸೆಸ್ ನಾಯಕರು ಸಭೆ ನಡೆಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಆರೆಸ್ಸೆಸ್ ನ ಶಾಖಾ ಕಚೇರಿ ಕೇಶವ ಶಿಲ್ಪಾದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಎನ್.ರವಿಕುಮಾರ್, ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಸುನಿಲ್ ಕುಮಾರ್ ಕಾರ್ಕಳ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವ ಆರೆಸ್ಸೆಸ್ ನಾಯಕರು
- ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಈ ಹಿಂದೆ ದೇಶದಲ್ಲಿದ್ದ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಹೋರಾಟವನ್ನು ನಿಲ್ಲಿಸಬಾರದು. ಸಾಲು ಸಾಲು ಅಸ್ತ್ರಗಳನ್ನು ಕಾಂಗ್ರೆಸ್ ಸರ್ಕಾರವೇ ಕೊಟ್ಟಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. 11 ಮಂದಿ ಕಾಲ್ತುಳಿತದಿಂದ ಸಾವನ್ನಪ್ಪಿರುವ ಪ್ರಕರಣ, ಮರು ಜಾತಿಗಣತಿ ಮಾಡಿಸುವುದು. ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡರೂ ಇಲ್ಲಿಯವರೆಗೂ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಸಿಎಂ ಹಾಗೂ ಡಿಸಿಎಂ ನಡುವೆ ಸಮನ್ವಯತೆ ಇಲ್ಲ. ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ಎಡವಿದೆ. ಹೀಗೆ ಸಾಲು ಸಾಲು ವಿಚಾರಗಳಿ ಇನ್ನು ಬಿಜೆಪಿ ಹೋರಾಟವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿಲ್ಲ. ಇದನ್ನು ತಕ್ಷಣದಿಂದಲೇ ಶುರು ಮಾಡಬೇಕು ಎಂಬುವುದು.
- ಜಿಲ್ಲಾಧ್ಯಕ್ಷರ ನೇಮಕದ ಬೆನ್ನಲ್ಲೇ ರಾಜ್ಯಾಧ್ಯಕ್ಷರ ಆಯ್ಕೆ ಶೀಘ್ರವಾಗಿ ಮಾಡಬೇಕಾಗಿದ್ದು, ಅದಕ್ಕೆ ಬೇಕಾದ ವೇದಿಕೆ ಸಿದ್ಧಪಡಿಸುವುದು.
ಹೀಗೆ ಎರಡು ಪ್ರಮುಖ ವಿಚಾರದ ಬಗ್ಗೆ ಆರೆಸ್ಸೆಸ್ ಪ್ರಮುಖರು ಹಾಗೂ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.