ಪ್ರತಿಯೊಂದು ವಸ್ತುಗಳ ಬೆಲೆಯೂ ದಿನೇದಿನೆ ಜಾಸ್ತಿಯಾಗ್ತಿದೆ. ಎಷ್ಟು ದುಡಿದರೂ ಕೈಯಲ್ಲಿ ಹಣ ಉಳಿಯದಂತಾಗಿದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗಂತೂ ಲಕ್ಷ ರೂಪಾಯಿ ಕೂಡ ಕಡಿಮೆ ಸಂಬಳ ಆಗಿದೆ. ಇದನ್ನೇ ಹಣಕಾಸು ಭಾಷೆಯಲ್ಲಿ ಹಣದುಬ್ಬರ ಎಂದು ಕರೆಯುತ್ತಾರೆ. ಅದರಲ್ಲೂ, ಮುಂದಿನ 10 ವರ್ಷಗಳಲ್ಲಂತೂ ರೂಪಾಯಿ ಮೌಲ್ಯ ಕಡಿಮೆಯಾಗುತ್ತಲೇ ಇರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗೆಯೇ, ಹಣದುಬ್ಬರವನ್ನು ಮೀರಿಸಲು ಹೂಡಿಕೆಯೊಂದೇ ದಾರಿ ಎಂದು ಹೇಳುತ್ತಿದ್ದಾರೆ.
ಹೆಚ್ಚಾಗುತ್ತಿದೆ ಹಣದುಬ್ಬರ ಪ್ರಮಾಣ
ಬೆಲೆಯೇರಿಕೆ ಅನ್ನೋದು ಕಟ್ಟಿಟ್ಟಬುತ್ತಿ
10 ವರ್ಷದಲ್ಲೇ ರೂಪಾಯಿ ಮೌಲ್ಯ ಕುಸಿತ
ಹಣದುಬ್ಬರ ಹೆಚ್ಚಾಗ್ತಿರೋ ಕಾರಣ ಪೆಟ್ರೋಲ್ ನಿಂದ ಹಿಡಿದು ತರಕಾರಿವರೆಗೆ ಬೆಲೆಯೇರಿಕೆ ನಿಶ್ಚಿತವಾಗಿದೆ. ಹಾಗಾಗಿ, ಬೆಲೆಯೇರಿಕೆ ಅನ್ನೋದು ಎಲ್ಲರಿಗೂ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಪ್ರತಿ ವರ್ಷ ಹಣದುಬ್ಬರ ಪ್ರಮಾಣ ಶೇ.6ರಷ್ಟು ಜಾಸ್ತಿಯಾಗ್ತಿರೋ ಕಾರಣ, ಈಗನ 1 ಲಕ್ಷ ರೂಪಾಯಿಯ ಮೌಲ್ಯವು 10 ವರ್ಷದ ಬಳಿಕ ಕೇವಲ 55,840 ರೂ. ಆಗಿರತ್ತೆ ಅನ್ನುತ್ತದೆ ಲೆಕ್ಕಾಚಾರ. ಹಾಗಾಗಿ, ಹಣ ಗಳಿಸೋರು, ಉಳಿಸೋರು, ಹೂಡಿಕೆ ಮಾಡೋರು ಯಾವಾಗಲೂ ಹಣದುಬ್ಬರದ ಜತೆ ಹೆಜ್ಜೆ ಹಾಕ್ಬೇಕು ಅನ್ನೋದು ತಜ್ಞರ ಅಂಬೋಣವಾಗಿದೆ.
1 ಲಕ್ಷ ರೂ. 20 ವರ್ಷ ಬಳಿಕ 31 ಸಾವಿರ ರೂ.
30 ವರ್ಷದ ಬಳಿಕ ಕೇವಲ 17 ಸಾವಿರ ರೂ.
ಹೂಡಿಕೆಯಿಂದ ಮಾತ್ರ ಇದನ್ನು ಮೀರಲು ಸಾಧ್ಯ
ಹಣದುಬ್ಬರವು ಇದೇ ಶೇ.6ರಷ್ಟು ಏರಿಕೆಯಾಗುತ್ತ ಹೋದರೆ, ಈಗ ನಮ್ಮ ಬಳಿ ಇರುವ ಒಂದು ಲಕ್ಷ ರೂಪಾಯಿಯ ಮೌಲ್ಯವು 20 ವರ್ಷದ ಬಳಿಕ ಕೇವಲ 31,180 ರೂಪಾಯಿಗೆ ಇಳಿಕೆಯುತ್ತದೆ. 30 ವರ್ಷದ ಬಳಿಕವಂತೂ ಅದು 17,410 ರೂಪಾಯಿಗೆ ಕುಸಿಯುತ್ತದೆ ಅನ್ನುತ್ತದೆ ಲೆಕ್ಕಾಚಾರ. ಹಾಗಾಗಿ, ದುಡಿಯುವ ಹಣವನ್ನು ಉಳಿಸುವ ಜತೆಗೆ ಹೂಡಿಕೆ ಮಾಡಬೇಕು ಎಂಬುದು ಬದಲಾದ ಕಾಲಘಟ್ಟದ ಲೆಕ್ಕಾಚಾರವಾಗಿದೆ.
ಹೂಡಿಕೆ ಯಾವುದಾದರೂ ರೀತಿ ಆಗಲಿ
ಇದು ಹಣದುಬ್ಬರವನ್ನು ಮೀರಿಸುವಂತಿರಲಿ
ಇಲ್ಲದಿದ್ದರೆ ದುಡಿದ ಹಣ ಉಳಿಯೋದೇ ಇಲ್ಲ
ನಾವು ಯಾವುದೇ ಕೆಲಸ ಮಾಡುತ್ತಿರಲಿ, ಯಾವುದೇ ಉದ್ಯಮದಲ್ಲಿರಲಿ, ದುಡಿದ ಹಣವನ್ನು ದುಡಿಸದ ಹೊರತಾಗಿ ಹಣದುಬ್ಬರವನ್ನು ಮೀರಿಸಲು ಆಗೋದಿಲ್ಲ. ಇದೇ ಕಾರಣಕ್ಕಾಗಿ, ಹಣದುಬ್ಬರವನ್ನು ಮೀರಿಸುವಷ್ಟು ರಿಟರ್ನ್ಸ್ ನೀಡುವ ಅಂದ್ರೆ, ಶೇ.6ಕ್ಕಿಂತ ಹೆಚ್ಚು ರಿಟರ್ನ್ಸ್ ಕೊಡೋ ರೀತಿಯ ಹೂಡಿಕೆ ಮಾಡಬೇಕು ಎಂಬುದು ಈಗ ಅಲಿಖಿತ ನಿಯಮವಾಗಿದೆ.
ಅದು ಎಫ್ ಡಿ ಆಗಿರಲಿ, ಪೋಸ್ಟ್ ಆಫೀಸಿನ ಆರ್ ಡಿಯೇ ಇರಲಿ, ಇಲ್ಲವೇ ಎಸ್ಐಪಿಯೇ ಆಗಿರಲಿ, ಶೇ.6ಕ್ಕಿಂತ ಹೆಚ್ಚು ರಿಟರ್ನ್ಸ್ ಇದ್ದರೆ ಮಾತ್ರ ಹಣದುಬ್ಬರವನ್ನು ಮೀರಿಸಲು ಸಾಧ್ಯವಾಗುತ್ತೆ. ಇಲ್ಲದಿದ್ದರೆ, ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯೋದೇ ಇಲ್ಲ. ಬೆಲೆಯೇರಿಕೆಯು ಹಣ ಉಳಿಯಲು ಬಿಡೋದಿಲ್ಲ ಎಂಬುದು ನಿಶ್ಚಿತವಾಗಿದೆ.
…
ಇನ್ಶೂರೆನ್ಸ್ ಇಲ್ಲದಿದ್ದರೆ ಬಡವರಾಗೋದು ಗ್ಯಾರಂಟಿ
ಹೆಲ್ತ್, ಟರ್ಮ್ ಇನ್ಶೂರೆನ್ಸ್ ಕೂಡ ಈಗ ಹೂಡಿಕೆಯೇ
ಹೂಡಿಕೆ ಜತೆಗೆ ಇವುಗಳನ್ನೂ ಮರೆಯದಿರಿ
ಜೀವನಶೈಲಿ ಬದಲಾಗಿದೆ. ಯಾವಾಗ ಬೇಕಾದರೂ ಯಾವ ಕಾಯಿಲೆ, ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಒಂದು ಆರೋಗ್ಯ ವಿಮೆ ಮಾಡಿಸಬೇಕು. ಇಲ್ಲದಿದ್ದರೆ, ಒಂದು ಆಸ್ಪತ್ರೆಯ ಬಿಲ್ ನಿಮ್ಮ ಉಳಿತಾಯದ ಎಲ್ಲ ಹಣವನ್ನೂ ಎಗರಿಸಿಬಿಡುತ್ತದೆ. ಇದರ ಜತೆಗೆ, ಟರ್ಮ್ ಇನ್ಶೂರೆನ್ಸ್ ಕೂಡ ನಿಮ್ಮ ಕುಟುಂಬದ ಸುರಕ್ಷತೆಯಿಂದ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.
ಒಟ್ನಲ್ಲಿ, ಕಾಲದ ಓಟದ ವೇಗಕ್ಕೆ ಮಿತಿಯೇ ಇಲ್ಲದ ಕಾರಣ, ಸಾಸಿವೆ ಡಬ್ಬದಲ್ಲೋ, ಮನೆಯ ತಿಜೋರಿಯಲ್ಲೋ ಹಣ ಉಳಿಸಿ ಹಣದುಬ್ಬರವನ್ನು ಸೋಲಿಸಲು ಆಗೋದಿಲ್ಲ. ಹಾಗಾಗಿ, ಸ್ಮಾರ್ಟ್ ಹೂಡಿಕೆ, ಸ್ಮಾರ್ಟ್ ಉಳಿತಾಯದಿಂದ ಹಣದುಬ್ಬರವನ್ನು ಸೋಲಿಸೋದು ಅಗತ್ಯವಾಗಿದೆ.