ನಮ್ಮ ರಾಜ್ಯದ್ದು ನಂದಿನಿ, ನಮ್ಮ ದೇಶದ್ದು ಅಮುಲ್. ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿಗಾಗಿಯೇ ಮಳಿಗೆ ಮೀಸಲಿಟ್ಟಿದ್ದರೆ ಕೊಡಲೇಬೇಕು. ನಂದಿನಿಗೂ ಜಾಗತಿಕ ಮಟ್ಟದಲ್ಲಿ ಸಹ ಸ್ಪರ್ಧೆ ಮಾಡುವ ಸಾಮರ್ಥ್ಯ ಬರಲಿ. ಎರಡೂ ರೈತರ ಸಂಸ್ಥೆಯೇ, ಎರಡಕ್ಕೂ ಅವಕಾಶ ಕೊಡಬೇಕು ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಮುಲ್ ಗೆ ಮಳಿಗೆ ಕೊಟ್ಟ ಹಾಗೆ ನಂದಿನಿಗೂ ಒಂದು ಮಳಿಗೆ ಕೊಡಬೇಕು. ಆಗ ಸಮಸ್ಯೆ ಇರಲ್ಲ. ಎರಡರ ಮಧ್ಯೆ ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಇದರಲ್ಲಿ ರಾಜಕೀಯ ಮಾಡೋದೇನೂ ಇಲ್ಲ. ಎರಡಕ್ಕೂ ಅವಕಾಶ ಕೊಡಲಿ. ಎರಡೂ ರೈತರ ಸಂಸ್ಥೆಯೇ. ಆದರೆ ಅಮೂಲ್ ಮತ್ತು ನಂದಿನಿ ನಡುವಿನ ತಾಂತ್ರಿಕ ಸ್ಪರ್ಧೆಯಲ್ಲಿ ಅಮುಲ್ ಗೆ ಅವಕಾಶ ಸಿಕ್ಕಿರಬಹುದು ಎಂದಿದ್ದಾರೆ.
ನಮ್ಮ ನಂದಿನಿ ಉತ್ತರ ಪ್ರದೇಶ ದೆಹಲಿಯಲ್ಲೂ ಮಳಿಗೆ ತೆರೆದಿದೆ. ನಂದಿನಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಳಿಗೆ ತೆರೆಯುವ ಸಾಮರ್ಥ್ಯ ಬರಲಿ. ನಾವು ಶಕ್ತಿ ತುಂಬೋಣ. ಇಲ್ಲಿ ಒಂದು ಆರೋಗ್ಯಕರ ಸ್ಪರ್ಧೆ ಇರಬೇಕು. ನಂದಿನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಗಲಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ರವಿ ಮಾತನಾಡಿದ್ದಾರೆ.
ವೃದ್ಧಾಪ್ಯ ವೇತನಕ್ಕೆ ಕಲ್ಲು ಹಾಕಲು ರಾಜ್ಯ ಸರ್ಕಾರ ಮುಂದಾಗಿರುವುದು ದುರ್ದೈವದ ಸಂಗತಿ. ಸರ್ಕಾರ ತನ್ನ ನಿರ್ಧಾರ ಮರು ಪರಿಶೀಲಿಸಲಿ. ಇದು ಮಾನವೀಯತೆಯ ನಿರ್ಧಾರ ಅಲ್ಲ ಎಂದಿದ್ದಾರೆ.