ಕಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ನಟ ಮೋಹನ್ ಬಾಬು ಚೆನ್ನೈನಲ್ಲಿ ಮತ್ತೆ ಒಂದಾದರು.ಇದಕ್ಕೆ ಕಾರಣ; “ಪೆದರಾಯುಡು” ಸಿನಿಮಾ. ಈ ಚಿತ್ರ ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು ವಿಷ್ಣು ಮಂಚು ನಟನೆಯ “ಕಣ್ಣಪ್ಪ” ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು.
ರವಿರಾಜ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ “ಪೆದರಾಯುಡು” ಸಿನಿಮಾ, ಅಂದಿನ ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಗಟ್ಟಿ ಕಥಾ ಶೈಲಿ, ನೆನಪಲ್ಲಿ ಉಳಿಯುವ ಅಭಿನಯಗಳು ಮತ್ತು ಅದ್ವಿತೀಯ ಮಾಸ್ ಆಕರ್ಷಣೆಯಿಂದ ತೆಲುಗು ಚಿತ್ರರಂಗದಲ್ಲಿ ಈ ಚಿತ್ರ ಶಾಶ್ವತವಾಗಿ ಉಳಿದಿದೆ. ಈ ಚಿತ್ರ 30 ವರ್ಷ ಪೂರೈಸಿದ ಬೆನ್ನಲ್ಲೇ ರಜನಿಕಾಂತ್ ಮತ್ತು ಮೋಹನ್ ಬಾಬು ಒಂದೆಡೆ ಸೇರಿ ಕಣ್ಣಪ್ಪ” ಚಿತ್ರ ವೀಕ್ಷಿಸಿದರು.
ಅಂದಹಾಗೆ, ಜೂನ್ 27 ರಂದು ಜಾಗತಿಕ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕಣ್ಣಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಶಿವನ ಭಕ್ತರಾದ ಕಣ್ಣಪ್ಪನ ಕಥೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡಿದ್ದಾರೆ.

ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ. “ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಆಧ್ಯಾತ್ಮ—all extraordinary,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, “ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ!” ಎಂದು ಸಂಭ್ರಮದಿಂದ ಹೇಳಿದರು.
ಅಂದಹಾಗೆ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಪುತ್ರನ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹತಾರಾಗಣದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೂನ್ 27 ರಂದು ಬಿಡುಗಡೆ ಆಗಲಿದೆ.